Baby Delivery: ಕೆಲವೇ ದಿನಕ್ಕೆ ಉತ್ತರ ಪ್ರದೇಶದ ನೋಯ್ಡಾ ಮೂಲದ ಗರ್ಭಿಣಿ ಮಹಿಳೆಗೆ ಹೆರಿಗೆ (Baby Delivery) ಆಗಬೇಕಿದ್ದ ಸಮಯದಲ್ಲಿ, ವೈದ್ಯಕೀಯ ತಪಾಸಣೆಗೆ ಆಟೋದಲ್ಲಿ ಹೋಗುವ ವೇಳೆ, ಅಪಘಾತಕ್ಕೆ ತುತ್ತಾದ ಕಾರಣ ಮಹಿಳೆಯ ತಲೆಗೆ ಗಂಭೀರ ಗಾಯವಾಗಿತ್ತು. ಪ್ರಜ್ಞೆ ತಪ್ಪಿದ್ದ ಮಹಿಳೆಯನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಸದ್ಯ ಆ ಸಂದರ್ಭದಲ್ಲಿಯೇ ಆಪರೇಷನ್ ಮಾಡಿ ಮಗುವನ್ನು ರಕ್ಷಿಸಿದ ವೈದ್ಯರು, ಬಳಿಕ ಮಹಿಳೆಗೂ ಚಿಕಿತ್ಸೆ ನೀಡಿ ಆಕೆಯ ಜೀವ ಉಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿ ಪ್ರಕಾರ, ಅಕ್ಟೋಬರ್ 17 ರಂದು ನಂದಿನಿ ತಿವಾರಿ ಅವರನ್ನು ದಿಲ್ಲಿ ಏಮ್ಸ್ನ ಟ್ರಾಮಾ ಕೇರ್ ಸೆಂಟರ್ಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಗೆ ಕರೆ ತಂದ ವೇಳೆ ನಂದಿನಿ ತಿವಾರಿ ಅವರು 39 ವಾರ, 5 ದಿನಗಳ ಗರ್ಭಿಣಿ ಆಗಿದ್ರು. ಅವರನ್ನು ಆಸ್ಪತ್ರೆಗೆ ತರುವಾಗಲೇ ಪ್ರಜ್ಞೆ ಇರಲಿಲ್ಲ. ಈ ವೇಳೆ ವೈದ್ಯರು ಸಿಟಿ ಸ್ಕ್ಯಾನ್ ಮಾಡಿದಾಗ ಅಪಘಾತದಿಂದಾಗಿ ನಂದಿನಿ ತಿವಾರಿ ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರೋದು ಪತ್ತೆಯಾಗಿತ್ತು. ಜೊತೆಗೆ ಎಡ ಭಾಗದ ಮಿದುಳು ಊತ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಿ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು.
ಆದರೆ ಮಹಿಳೆ ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಶಿಶು ಎರಡನ್ನೂ ರಕ್ಷಣೆ ಮಾಡಲೇ ಬೇಕು ಎಂದು ನಿರ್ಧರಿಸಿದ್ದ ದಿಲ್ಲಿ ಏಮ್ಸ್ನ ಟ್ರಾಮಾ ಕೇರ್ ಕೇಂದ್ರದ ತಜ್ಞ ವೈದ್ಯರು, ಮಹಿಳೆ ಪ್ರಜ್ಞಾಹೀನರಾಗಿ ವೆಂಟಿಲೇಟರ್ನಲ್ಲಿ ಇರುವ ಹೊತ್ತಲ್ಲೇ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ (Baby Delivery) ಕಾರ್ಯ ನಡೆಸಿದ್ದಾರೆ. ಕಳೆದ ವಾರವೇ ಮಗು ಜನನವಾಗಿದ್ದು, ಇದೀಗ ತಾಯಿಗೂ ಪ್ರಜ್ಞೆ ಬಂದಿದೆ.
ಸದ್ಯ ಆಪರೇಷನ್ ಮೂಲಕ ನಂದಿನಿ ತಿವಾರಿ ಅವರ ಹೆರಿಗೆ ನೆರವೇರಿಸಿದ ವೈದ್ಯರು, ಮಗುವನ್ನು ಮಕ್ಕಳ ಐಸಿಯುಗೆ ರವಾನಿಸಿದರು. ಬಳಿಕ ಮಹಿಳೆಯನ್ನು 6 ದಿನಗಳ ಕಾಲ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಈಗಲೂ ಈ ಮಹಿಳೆ ಐಸಿಯುನಲ್ಲೇ ಇದ್ದಾರೆ. ಇನ್ನೊಂದು ವಾರದ ಬಳಿಕ ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ದಿಲ್ಲಿ ಏಮ್ಸ್ನ ಡಾ. ಗುಪ್ತಾ ಅವರು ನಂದಿನಿ ತಿವಾರಿ ಅವರ ಆರೋಗ್ಯ ಸ್ಥಿತಿ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.
ಇನ್ನು ತಾಯಿಯಿಂದ ಕೃತಕವಾಗಿ ಎದೆ ಹಾಲು ಸಂಗ್ರಹಿಸಿ ಮಗುವಿಗೆ ನೀಡಲಾಗುತ್ತಿದೆ. ಪ್ರತಿ ಮೂರು ಗಂಟೆಗೆ ಒಮ್ಮೆ ಎದೆ ಹಾಲು ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗರ್ಭಿಣಿ ಆಗಿದ್ದ ವೇಳೆಗೆ ಮಹಿಳೆಯ ತಲೆಗೆ ಗಾಯವಾಗಿದ್ದ ಕಾರಣ, ಆಕೆ ಚೇತರಿಕೆ ಕಾಣಲು ಇನ್ನೂ ಕೆಲವು ವಾರಗಳು ಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ದಿನಾಂಕ ಫಿಕ್ಸ್- RSS ನಾಯಕ ಮೋಹನ್ ಭಾಗವತ್ ರಿಂದ ಅಚ್ಚರಿಯಂತೆ ಘೋಷಣೆ
