Elephant Death: ಬಂಡೀಪುರದ ಹೆಡಿಯಾಲ ಉಪವಿಭಾಗಕ್ಕೆ ಸೇರಿದ ರಾಮಾಪುರ ಆನೆ ಶಿಬಿರದಲ್ಲಿದ್ದ ಅಕ್ಕಿರಾಜಾ ಆಲಿಯಾಸ್ ಕರ್ಣ ಎಂಬ ಆನೆ ಆರೋಗ್ಯವಾಗಿಯೇ ಇದ್ದ ಸಂದರ್ಭ ತರಬೇತಿ ನೀಡುತ್ತಿದ್ದಾಗ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದಿದೆ. ಕೂಡಲೇ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ ಎಂದು ಹೆಡಿಯಾಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್ ಹೇಳಿದ್ದಾರೆ.
ಮೂಲತಃ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ಹಾವಳಿ ನೀಡುತ್ತಿದ್ದ ಅಕ್ಕಿರಾಜ ಆನೆಯನ್ನು ಜೂನ್ 7 ರಂದು ಸೆರೆ ಹಿಡಿಯಲಾಗಿತ್ತು. ನಂತರ ಹೆಡಿಯಾಲ ಉಪವಿಭಾಗದ ಐನೂರು ಮಾರಿಗುಡಿ ವಲಯದ ರಾಮಾಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೇ ಕ್ರಾಲ್ನಲಿ ಇಟ್ಟು ಕಾಡಾನೆಯನ್ನು ನುರಿತ ಆನೆ ಮಾವುತ ಹಾಗೂ ಕವಾಡಿಗರ ಸಹಕಾರದಿಂದ ಪಳಗಿಸಲಾಗುತ್ತಿತ್ತು. ಆನಂತರ ಆನೆಯನ್ನು ಅಕ್ಟೋಬರ್ 21 ರಂದು ಹೊರ ಬಿಡಲಾಗಿತ್ತು.
ನಂತರ ಸಾಕಾನೆಗಳೊಂದಿಗೆ ಸೇರಿಸಿ ನಿತ್ಯ ತರಬೇತಿ ನೀಡುವುದು ಮುಂದುವರೆದಿತ್ತು. ಆದರೆ ಮಂಗಳವಾರ ಮಧ್ಯಾಹ್ನ 2ರ ಹೊತ್ತಿಗೆ ಶಿಬಿರದಲ್ಲಿದ್ದ ಅಕ್ಕಿರಾಜ ಆನೆ ಏಕಾಏಕಿ ಕುಸಿದು ಬಿದ್ದಿದೆ. ಹಠಾತ್ತನೇ ಬಿದ್ದುದನ್ನು ಗಮನಿಸಿದ ಸಿಬ್ಬಂದಿ ತಿಳಿಸಿದ್ದರಿಂದ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಆನೆ ಮೃತಪಟ್ಟಿದೆ(Elephant Death).
ಮಾಹಿತಿ ಪ್ರಕಾರ, ಈ ಆನೆ ಕಾರ್ಡಿಯೋಮೇಗಲಿ(Cardio Megaly) ಅಂದರೆ ಸಾಮಾನ್ಯ ಹೃದಯಕ್ಕಿಂತ ಮೂರು ಪಟ್ಟು ಹೃದಯ ಗಾತ್ರ ದೊಡ್ಡದಿರುವುದು, ಹಠಾತ್ ಹೃದಯಾಘಾತ ಅಂದರೆ ನಿಂತಲ್ಲೇ ಹಠಾತ್ ಹೃದಯ ಸ್ತಂಭನ ಸಂಭವಿಸಿ,ಲಿವರ್ ಸಿರಿಯೋಸಿಸ್(Liver Cirrhosis) ಅಂದರೆ ಯಕೃತ್ ವೈಫಲ್ಯ ದಿಂದ ಮೃತಪಟ್ಟಿದೆ ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಸದ್ಯ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಕ್ರಿಯೆ ನಡೆಸಲಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮೀ ಹಣ ಬಾರದ ಮಹಿಳೆಯರಿಗೆ ಸಂತಸದ ಸುದ್ದಿ- ನಿಮಗಿನ್ನು ಈ ಹೊಸ ಖಾತೆಗೆ ಜಮಾ ಆಗುತ್ತೆ 2,000 !!
