Home » Dr C N Manjunath : ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಸೇವಾವಧಿ ಮುಕ್ತಾಯ- ಇವರೇ ನೋಡಿ ಮುಂದಿನ ನಿರ್ದೇಶಕ

Dr C N Manjunath : ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಸೇವಾವಧಿ ಮುಕ್ತಾಯ- ಇವರೇ ನೋಡಿ ಮುಂದಿನ ನಿರ್ದೇಶಕ

by ಹೊಸಕನ್ನಡ
0 comments
Dr C N Manjunath

Dr C N Manjunath: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್(Dr C N Manjunath) ಅವರ ಸೇವಾವಧಿ ಇದೇ 19ಕ್ಕೆ ಮುಕ್ತಾಯಗೊಳ್ಳಲಿದೆ.

ಹೌದು, ಲಕ್ಷಾಂತರ ಜನಕ್ಕೆ ಮರುಜೀವ ನೀಡಿದ, ಬಡವರ ಪಾಲಿಗೆ ಕಣ್ಣಿಗೆ ಕಾಣುವ ದೇವರಾಗಿದ್ದ, ಖ್ಯಾತ ಹೃದ್ರೋಗ ತಜ್ಞರು, ಬೆಂಗಳೂರು ಜಯದೇವ ಆಸ್ಪತ್ರೆಯ(Bangalore jayadev hospital)ನಿರ್ದೇಶಕರಾದ ಡಾ. ಸಿ. ಎನ್ ಮಂಜುನಾಥ್ ಅವರ ಸೇವಾವಧಿ ಜು.19ರಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಡಾ.ಮಂಜುನಾಥ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ.

ಡಾ.ಮಂಜುನಾಥ್ (Dr. Manjunath) ಅವರ ಸೇವಾವಧಿ ಕಳೆದ ವರ್ಷ ಜುಲೈ 19ರಂದೇ ಮುಕ್ತಾಯ ಆಗಬೇಕಿತ್ತು. ಆದರೆ ರೋಗಿಗಳು, ಜನರ ಒತ್ತಾಯದ ಮೇರೆಗೆ ಕಳೆದ ಬಾರಿಯ ಸರ್ಕಾರ ಒಂದು ವರ್ಷಗಳ ಸೇವೆ ಮುಂದುವರಿಸಿತ್ತು. 1 ವರ್ಷಕ್ಕೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಖುದ್ದಾಗಿ ಡಾ.ಸಿ.ಎನ್​. ಮಂಜುನಾಥ್ ಅವರಿಗೆ ಕರೆ ಮಾಡಿ ತಿಳಿಸಿದ್ದರು. ಆದರೀಗ ಆ ಅವಧಿಯೂ ಮುಕ್ತಾಯವಾಗಲಿದ್ದು ಮಂಜುನಾಥ್ ಅವರು ನಿವೃತ್ತಿ ಹೊಂದಲಿದ್ದಾರೆ.

ಇನ್ನೂ 2007 ರಿಂದ ಅಂದರೆ ಸತತ 16 ವರ್ಷಗಳಿಂದಲೂ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿರುವ, ಮಂಜುನಾಥ್, ಇದೀಗ ಸೇವಾವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸಿಎಂ ಭೇಟಿ ಮಾಡಿ ಚರ್ಚೆ ಮಾಡಲಿದ್ದಾರೆ. ಆದರೆ ಸಿಬ್ಬಂದಿಗಳು ಮಂಜುನಾಥ್ ಅವರನ್ನೇ ಮುಂದುವರೆಸಬೇಕು ಎಂದು ಮನವಿ ಮಾಡಿದ್ದಾರೆ. ಕಳೆದ ವರ್ಷವೂ ಹೀಗೆ ಆಗಿತ್ತು. ಇಂಡಿಯನ್ ಮೆಡಿಕಲ್ ಕೌನ್ಸಿಲ್(Indian medical council)ನಿಯಮದ ಪ್ರಕಾರ ಗರಿಷ್ಠ 70 ವರ್ಷದ ವರೆಗೂ ಸೇವೆ ಸಲ್ಲಿಸಬಹುದು. ಆದರೆ ಸದ್ಯ ಡಾ. ಮಂಜುನಾಥ್ ಅವರಿಗೆ 65 ವರ್ಷ ಮಾತ್ರ. ಹೀಗಾಗಿ ಇನ್ನಷ್ಟು ವರ್ಷ ಅವರನ್ನ ನಿರ್ದೇಶಕರಾಗಿ ಮುಂದುವರೆಸಬೇಕು ಒತ್ತಾಯ ಮಾಡಲಾಗುತ್ತಿದೆ.

ಡಾ. ಮಂಜುನಾಥ್ ಅವರ ಸಾಧನೆ:
ಕರುಣೆ, ಶಿಸ್ತು, ಮಾರ್ಗದರ್ಶನ, ಸೂಕ್ತ ನಿರ್ದೇಶನಗಳ ಮೂಲಕ ಮುಳುಗುತ್ತಿದ್ದ ಸಂಸ್ಥೆಯನ್ನು ಡಾ. ಸಿ.ಎನ್. ಮಂಜುನಾಥ್ ಮೇಲೆತ್ತಿ ಮುನ್ನಡೆಸುತ್ತಿದ್ದಾರೆ. 2007 ರಿಂದ ಅಂದರೆ ಸತತ 16 ವರ್ಷಗಳಿಂದಲೂ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಮಂಜುನಾಥ್ ಅವರು ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಾಗಿನಿಂದ ಇಲ್ಲಿಯವರೆಗೂ ಜಯದೇವ ಆಸ್ಪತ್ರೆಯಲ್ಲಿ 50 ಲಕ್ಷಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 6 ಲಕ್ಷಕ್ಕೂ ಹೆಚ್ಚು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನಡೆದಿದೆ. ವೈಯಕ್ತಿಕವಾಗಿ ಮಂಜುನಾಥ್ ಅವರು 54 ಸಾವಿರಕ್ಕೂ ಅಧಿಕ ಹಾರ್ಟ್ ಆಪರೇಷನ್ ಮಾಡಿದ್ದಾರೆ.

ಅವರು ಅಧಿಕಾರ ವಹಿಸಿಕೊಂಡ ನಂತರ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಸೇರಿ ಗುಣಮಟ್ಟದ ಹೃದಯ ಸೇವೆ ನೀಡುವಲ್ಲಿ ದೇಶ ವಿದೇಶಗಳ ರೋಗಿಗಳನ್ನು ಆಕರ್ಷಿಸಿದೆ. 2015ರಲ್ಲಿ ಎನ್‌ಎಬಿಎಚ್ (ನ್ಯಾಷನಲ್ ಅಕ್ರಿಡೇಷನ್ ಬೋರ್ಡ್ ಫಾರ್ ಹಾಸ್ಪೆಟಲ್ ಆ್ಯಂಡ್ ಹೆಲ್ತ್‌ಕೇರ್ ಪ್ರೊವೈಡರ್ಸ್‌) ಮಾನ್ಯತೆ ಪಡೆದುಕೊಂಡ ಏಕೈಕ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಿದೆ. ‘ಟ್ರೀಟ್ ಮೆಂಟ್ ಫಸ್ಟ್ ಪೇಮೆಂಟ್ ನೆಕ್ಸ್ಟ್​​’ ಎಂಬ ಘೋಷವಾಕ್ಯದೊಂದಿಗೆ ದಕ್ಷತೆ, ಪ್ರಾಮಾಣಿಕತೆ, ನಿಷ್ಠೆ, ಕ್ರಿಯಾಶೀಲತೆ, ಸೌಜನ್ಯಶೀಲತೆಯೊಂದಿಗೆ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಭಾರತದ ಪ್ರತಿಷ್ಠಿತ 10 ಹೃದ್ರೋಗ ಆಸ್ಪತ್ರೆಗಳ ಪಟ್ಟಿಯಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಮೊದಲ ಸ್ಥಾನದಲ್ಲಿದ್ದು, ಆಂಜಿಯೋಪ್ಲಾಸ್ಟಿ, ವ್ಯಾಲ್‌ವಿಲೋಪ್ಲಾಸ್ಟಿ ಮತ್ತು ಸ್ಟಂಟ್ ಪ್ರಕ್ರಿಯೆಯಲ್ಲಿ ವಿಶ್ವವಿಖ್ಯಾತಿ ಪಡೆದಿದೆ.

ವೈದ್ಯಕೀಯ ರಂಗದಲ್ಲಿ ಡಾ.ಮಂಜುನಾಥ್ ಸಲ್ಲಿಸಿರುವ ಸೇವೆಗೆ ಭಾರತ ಸರ್ಕಾರದ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸರ್ ಸಿ.ವಿ.ರಾಮನ್ ಯುವ ವಿಜ್ಞಾನಿ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ, ದಿ ಗ್ರೇಟ್ ಮ್ಯಾನ್ ಆಫ್ ಕರ್ನಾಟಕ ಪ್ರಶಸ್ತಿ ಲಭಿಸಿದೆ. ಸದ್ಯ ಅವರ ಸೇವಾ ಅವಧಿ ಮುಕ್ತಾಯವಾಗಿದ್ದು, ಅಭಿಮಾನಿಗಳು ಹಾಗೂ ರೋಗಿಗಳು, ಸಿಬ್ಬಂದಿಗಳ ಒತ್ತಾಯದ ಮೇರೆಗೆ ಸರ್ಕಾರ ಇವರನ್ನೇ ಮುಂದುವರೆಸುತ್ತದೇಯಾ ಎಂದು ಕಾದು ನೋಡಬೇಕು.

ಇದನ್ನೂ ಓದಿ: Education department: ಬಿಸಿಯೂಟದ ಸ್ತ್ರೀಯರು ಬಳೆ ಹಾಕುವಂತಿಲ್ಲ !! ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಶಿಕ್ಷಣ ಇಲಾಖೆ !

You may also like

Leave a Comment