N. Chandrababu Naidu : ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (N. Chandrababu Naidu)ಅವರನ್ನು ಶನಿವಾರ ಬೆಳ್ಳಂಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರ ಬಂಧನ ಸದ್ಯ, ರಾಜಕೀಯ ಕೋಲಾಹಲ ಸೃಷ್ಟಿಸಿದೆ. ಆಂಧ್ರ ಪ್ರದೇಶ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದ್ದು, ಈ ಹಗರಣದಲ್ಲಿ 371 ಕೋಟಿ ರೂಪಾಯಿ ಅಕ್ರಮ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.
ನಂದ್ಯಾಲ ವ್ಯಾಪ್ತಿಯ ಡಿಐಜಿ ರಘುರಾಮಿ ರೆಡ್ಡಿ ನೇತೃತ್ವದ ಪೊಲೀಸರು ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಚಂದ್ರಬಾಬು ನಾಯ್ಡು ಅವರಿದ್ದ ನಿವಾಸಕ್ಕೆ ದಾಳಿ ಮಾಡಿ ಬಂಧಿಸಿದ್ದಾರೆ. ಟಿಡಿಪಿ ಕಾರ್ಯಕರ್ತರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, 350 ಕೋಟಿ ರೂ. ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ (APSSDC) ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಯನ್ನು ಬಂಧಿಸಲಾಗಿದೆ. 120ಬಿ (ಕ್ರಿಮಿನಲ್ ಪಿತೂರಿ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು) ಮತ್ತು 465 (ನಕಲಿ) ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ನಾಯ್ಡು ಅವರನ್ನು ಬಂಧಿಸಲಾಗಿದೆ. ಇದರ ಜೊತೆಗೆ ಭ್ರಷ್ಟಾಚಾರ ತಡೆ ಕಾಯ್ದೆಯನ್ನೂ ಕೂಡ ವಿಧಿಸಲಾಗಿದೆ.
ಆಂಧ್ರಪ್ರದೇಶದ ಟಿಡಿಪಿ ಸರ್ಕಾರದ ಅವಧಿಯಲ್ಲಿ 2016 ರಲ್ಲಿ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮವನ್ನು (APSSDC) ಸ್ಥಾಪಿಸಲಾಗಿದೆ. ಈ ಯೋಜನೆಯು ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಉದ್ದೇಶ ಹೊಂದಿದೆ. ಇದರಲ್ಲಿ 3,300 ಕೋಟಿ ರೂ.ಗಳ ಹಗರಣ ನಡೆದಿದೆ. ಈ ಬಗ್ಗೆ ಎಪಿ ಸಿಐಡಿ ಮಾರ್ಚ್ನಲ್ಲಿ 3,300 ಕೋಟಿ ರೂ.ಗಳ ಹಗರಣದ ತನಿಖೆಯನ್ನು ಆರಂಭಿಸಿದೆ.
ಸಿಐಡಿ ಪ್ರಾಥಮಿಕ ತನಿಖೆ ವರದಿ ಏನು ಹೇಳುತ್ತಿದೆ?
ಟಿಡಿಪಿ ಸರ್ಕಾರವು 3,300 ಕೋಟಿ ರೂಗಳ ಯೋಜನೆಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದೆ. ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್ವೇರ್ ಇಂಡಿಯಾ ಲಿಮಿಟೆಡ್ ಮತ್ತು ಡಿಸೈನ್ ಟೆಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಈ ಎಂಒಯುನಲ್ಲಿ ಭಾಗಿಯಾಗಿರುವುದನ್ನ ತಿಳಿಸಿದೆ. ರಾಜ್ಯ ಸರ್ಕಾರವು ಒಟ್ಟು ಯೋಜನಾ ವೆಚ್ಚದಲ್ಲಿ ಸುಮಾರು 10% ರಷ್ಟು ಕೊಡುಗೆಯನ್ನು ಕೊಡಬೇಕಾಗಿತ್ತು. ಸೀಮೆನ್ಸ್ ಮತ್ತು ಡಿಸೈನ್ ಟೆಕ್ ಉಳಿದ ಹಣದ ವ್ಯವಸ್ಥೆ ನೀಡಬೇಕು. ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್ವೇರ್ ಇಂಡಿಯಾಗೆ ಕೌಶಲ್ಯ ಅಭಿವೃದ್ಧಿಗಾಗಿ 6 ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯವನ್ನು ವಹಿಸಲಾಗಿದೆ.
ಭಾರತೀಯ ರೈಲ್ವೆ ಸಂಚಾರ ಸೇವೆ (IRTS) ಮಾಜಿ ಅಧಿಕಾರಿ ಅರ್ಜಾ ಶ್ರೀಕಾಂತ್ ಅವರಿಗೆ ನೋಟಿಸ್ ನೀಡಿದ ಬಳಿಕ ತನಿಖೆಯನ್ನು ನಡೆಸಲಾಗಿದೆ. ಅರ್ಜಾ ಶ್ರೀಕಾಂತ್ ಅವರು 2016 ರಲ್ಲಿ APSSDC ಯ CEO ಆಗಿದ್ದರು. ಈ ಯೋಜನೆಯಡಿ ಯುವಕರಿಗೆ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಅವಶ್ಯಕ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಬೇಕಿತ್ತು. ಇದರ ಜವಾಬ್ದಾರಿಯನ್ನು ಸೀಮೆನ್ಸ್ ಎಂಬ ಕಂಪನಿಗೆ ಹಸ್ತಾಂತರ ಮಾಡಿದೆ. ಈ ಯೋಜನೆಗೆ ಒಟ್ಟು 3300 ಕೋಟಿ ರೂ.ಗಳನ್ನು ವ್ಯಯಿಸಬೇಕಾಗಿತ್ತು. ಆಗಿನ ನಾಯ್ಡು ಸರ್ಕಾರವು 10 ಪ್ರತಿಶತ ಅಂದರೆ ಒಟ್ಟು 370 ಕೋಟಿ ರೂ. ಉಳಿದ 90 ಪ್ರತಿಶತ ವೆಚ್ಚವನ್ನು ಕೌಶಲ್ಯ ಅಭಿವೃದ್ಧಿ ತರಬೇತಿ ಕಂಪನಿ ಸೀಮೆನ್ಸ್ ಭರಿಸಲಿದೆ. ನಾಯ್ಡು ಸರ್ಕಾರ 371 ಕೋಟಿ ರೂ.ಗಳನ್ನು ಶೆಲ್ ಕಂಪನಿಗಳಿಗೆ ರವಾನೆ ಮಾಡಿದೆ ಎಂದು ಆರೋಪ ಮಾಡಲಾಗಿದ್ದು, ಇದರ ಜೊತೆಗೆ ಹಣ ವರ್ಗಾವಣೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನಾಶ ಮಾಡಲಾಗಿದೆ ಎನ್ನಲಾಗಿದೆ.
ತನಿಖೆಯಲ್ಲಿ ಮಹತ್ವದ ಸಂಗತಿ ಬಯಲಾಗಿದ್ದು, ಗುಣಮಟ್ಟದ ಟೆಂಡರ್ ಪ್ರಕ್ರಿಯೆ ಕೊರತೆಯಿರುವುದು ತಿಳಿದುಬಂದಿದೆ. ಟೆಂಡರ್ ಪ್ರಕ್ರಿಯೆ ಅನುಸರಿಸದೆ ಯೋಜನೆ ಆರಂಭಿಸಲಾಗಿದೆ ಎನ್ನಲಾಗಿದೆ. ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರಲಿಲ್ಲ ಆದರೂ ಕೂಡ ಯೋಜನೆಗೆ ಚಾಲನೆ ನೀಡಲಾಗಿದೆ. ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್ವೇರ್ ಇಂಡಿಯಾ ಈ ಯೋಜನೆಯಲ್ಲಿ ತನ್ನದೇ ಆದ ಯಾವುದೇ ಸಂಪನ್ಮೂಲಗಳನ್ನು ಹೂಡಿಕೆ ಮಾಡಲು ವಿನಿಯೋಗಿಸಿಲ್ಲ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ 371 ಕೋಟಿ ರೂ.ಗಳನ್ನು ಕೆಲವು ಶೆಲ್ ಕಂಪನಿಗಳಿಗೆ ಅಂದರೆ, ಲೇಯ್ಡ್ ಕಂಪ್ಯೂಟರ್ಸ್, ಸ್ಕಿಲ್ಲರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನಾಲೆಡ್ಜ್ ಪೋಡಿಯಮ್, ಕ್ಯಾಡೆನ್ಸ್ ಪಾರ್ಟ್ನರ್ಸ್ ಮತ್ತು ಇಟಿಎ ಗ್ರೀನ್ಸ್ ಕಂಪನಿಗಳಿಗೆ ರವಾನೆ ಮಾಡಿದೆ ಎನ್ನಲಾಗಿದೆ
