Uttar Pradesh: ಲಕ್ನೋ: ಉತ್ತರಪ್ರದೇಶದಲ್ಲಿ (Uttar Pradesh Encounter) ಮತ್ತೊಂದು ಪಾತಕಿಯ ಹೆಣ ಬಿದ್ದಿದೆ. ಕೊಲೆ ಮತ್ತು ಡಕಾಯಿತಿ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬನನ್ನು ಕೌಶಂಬಿ ಜಿಲ್ಲೆಯಲ್ಲಿ ಎನ್ಕೌಂಟರ್ (UP Encounter) ಮಾಡಲಾಗಿದೆ.
ಪೊಲೀಸ್ ಎನ್ಕೌಂಟರ್ ನಲ್ಲಿ ಸತ್ತ ಪಾತಕಿಯನ್ನು ಗುಫ್ರಾನ್ ಎಂದು ಗುರುತಿಸಲಾಗಿದೆ. ಆತ ಪ್ರತಾಪ್ಗಢ್ ಮತ್ತು ಇತರ ಜಿಲ್ಲೆಗಳಲ್ಲಿ ಕೊಲೆ, ಧಮಕಿ ಮತ್ತು ದರೋಡೆ ಸೇರಿದಂತೆ 13 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ. ಆತನನ್ನು ಹೊಡೆದು ಮಲಗಿಸಿದ ಯುಪಿ ಪೊಲೀಸರಿಗೆ ಯೋಗಿ ಸರ್ಕಾರವು 1 ಲಕ್ಷ ರೂಪಾಯಿಗಳ ಬಹುಮಾನ ನೀಡಿದೆ.
ಯೋಗಿ ಸರ್ಕಾರ್ ಮತ್ತು ಅಪರಾಧಿಗಳ ನಡುವಿನ ಸರಣಿ ಎನ್ಕೌಂಟರ್ಗಳಲ್ಲಿ ಇದು ಲೇಟೆಸ್ಟ್ ಆಗಿದ್ದು, 2017 ರಲ್ಲಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ತೆಗೆದುಕೊಂಡ ಬಳಿಕ, 10,900 ಕ್ಕೂ ಹೆಚ್ಚು ಎನ್ಕೌಂಟರ್ಗಳು ( ಶೂಟಿಂಗ್) ನಡೆದಿವೆ ಎನ್ನಲಾಗಿದೆ. ಅವುಗಳಲ್ಲಿ ಒಟ್ಟು 185 ಕ್ರಿಮಿನಲ್ಗಳು ಈವರೆಗೆ ಹತ್ಯೆಯಾಗಿದ್ದಾರೆ.
ಇಂದು ಮಂಗಳವಾರ ಮುಂಜಾನೆ 5:00 ಗಂಟೆ ಸುಮಾರಿಗೆ ವಿಶೇಷ ಕಾರ್ಯಪಡೆಯ ತಂಡವು ದಾಳಿ ನಡೆಸಿದಾಗ, ಗುಫ್ರಾನ್ ತಂಡದವರು ಸಹ ಪೊಲೀಸರ ಮೇಲೆ ಗುಂಡಿನ ಪ್ರತಿದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ಕ್ರಾಸ್ ಫೈರಿಂಗ್ನಲ್ಲಿ ಗುಫ್ರಾನ್ ಮೇಲೆ ಗುಂಡು ಹಾರಿಸಿ ಎನ್ಕೌಂಟರ್ ಮಾಡಿದ್ದಾರೆ. ಮೊದಲು ತೀವ್ರವಾಗಿ ಗಾಯಗೊಂಡಿದ್ದ ಗುಫ್ರಾನ್ನನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ.
