Amit Shah: ಹಿಂದಿ ಹೇರಿಕೆ ಮಾಡಲಾಗುತ್ತದೆ ಎಂದು ಆರೋಪ ಮಾಡುವವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ರಾಜ್ಯ ಸಭೆಯಲ್ಲಿ ತಿರುಗೇಟು ನೀಡಿದ್ದು, ಭಾಷೆಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕೆಲಸ ಮಾಡಬಾರದು ಎನ್ನುತ್ತಾ, ಪ್ರಾದೇಶಿಕ ಭಾಷೆಗಳ ಉತ್ತೇಜನಕ್ಕಾಗಿ ಡಿಸೆಂಬರ್ನಿಂದ ರಾಜ್ಯಗಳ ಜೊತೆ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲಿಯೇ ಪತ್ರ ವ್ಯವಹಾರ ಮಾಡುವುದಾಗಿ ಘೋಷಿಸಿದ್ದಾರೆ.
ಈ ಮೂಲಕ ಕರ್ನಾಟಕ ಸರಕಾರದ ಜೊತೆ ಕನ್ನಡದಲ್ಲಿ, ತಮಿಳುನಾಡು ಸರಕಾರದ ಜೊತೆ ತಮಿಳು ಹಾಗೂ ಇತರ ರಾಜ್ಯಗಳ ಜೊತೆ ಅಲ್ಲಿನ ಭಾಷೆಯಲ್ಲಿ ಪತ್ರ ವ್ಯವಹಾರವನ್ನು ಅಮಿತ್ ಶಾ ಮಾಡಲಿದ್ದಾರೆ.
ಡಿಸೆಂಬರ್ ನಂತರ ನಾಗರಿಕರು, ಮುಖ್ಯಮಂತ್ರಿಗಳು, ಸಚಿವರು, ಸಂಸತ್ ಸದಸ್ಯರ ಜೊತೆ ಅವರದೇ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುತ್ತೇನೆ. ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಭಾಷೆಯ ಹೆಸರಿನಲ್ಲಿ ರಾಜಕೀಯ ನಡೆಸುವವರಿಗೆ ಇದು ಬಲವಾದ ಪ್ರತ್ಯುತ್ತರವಾಗಿ ಎಂದು ಅಮಿತ್ ಶಾ ಹೇಳಿದರು.
ಬಿಜೆಪಿ ದಕ್ಷಿಣ ಭಾರತದ ಭಾಷೆಗಳನ್ನು ವಿರೋಧ ಮಾಡುತ್ತದೆ ಎನ್ನುವ ಆರೋಪಗಳಿಗೆ ಪ್ರತ್ಯುತ್ತರವಾಗಿ ಅಮಿತ್ ಶಾ ಈ ರೀತಿ ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಅವರು ಹೇಳುತ್ತಿರುವುದೇನು? ನಾವು ದಕ್ಷಿಣದ ಭಾಷೆಗಳನ್ನು ವಿರೋಧ ಮಾಡುತ್ತಿದ್ದೇವೆಯೇ? ಇದು ಹೇಗೆ ಸಾಧ್ಯ? ನಾನು ಗುಜರಾತ್ನಿಂದ ಬಂದವನು, ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು. ಹೀಗಿದ್ದಾಗ ನಾವು ಪ್ರಾದೇಶಿಕ ಭಾಷೆಗಳನ್ನು ವಿರೋಧಿಸುವುದು ಯಾವ ರೀತಿಯಲ್ಲಿ? ಎಂದು ಪ್ರಶ್ನೆ ಮಾಡಿದರು.
