Elephant : ಗಜರಾಜನಿಗೆ ಫುಲ್ ರಿಲೀಫ್!! ಇನ್ನು ಮುಂದೆ ಉತ್ಸವ, ಮೆರವಣಿಗೆಯಲ್ಲಿ ಆನೆ ಬಳಕೆ ಮಾಡುವಂತಿಲ್ಲ. ಉತ್ಸವ, ದೇವಾಲಯಗಳಲ್ಲಿ ಆನೆಗಳ ಬಳಕೆಗೆ ನಿಷೇಧ ಹೇರಿ ಹೈ ಕೋರ್ಟ್ ಆದೇಶ ಹೊರಡಿಸಿದೆ.
ತಮಿಳುನಾಡಿನ (Tamil Nadu) ಯಾವುದೇ ದೇವಾಲಯ (Temple), ಧಾರ್ಮಿಕ ಸಂಸ್ಥೆಗಳು ಅಥವಾ ಖಾಸಗಿ ವ್ಯಕ್ತಿಗಳು ಇನ್ನು ಮುಂದೆ ಆನೆಗಳನ್ನು ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ನ (Madras High Court) ಮಧುರೈ ಪೀಠ ಆದೇಶ ಹೊರಡಿಸಿದೆ. ದೇವಸ್ಥಾನಗಳು ಮತ್ತು ಖಾಸಗಿ ವ್ಯಕ್ತಿಗಳ ಒಡೆತನದ ಆನೆಗಳು ಸೇರಿದಂತೆ ರಾಜ್ಯದ ಎಲ್ಲಾ ಬಂಧಿತ ಆನೆಗಳನ್ನು ಸರ್ಕಾರ ನಡೆಸುತ್ತಿರುವ ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲು (Rehabilitation Camp) ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ. ಹೀಗಾಗಿ, ಉತ್ಸವ, ದೇವಾಲಯಗಳಲ್ಲಿ ಬಂಧಿತ ಆನೆಗಳ (Elephant) ಅನುಭವಿಸುವ ಹಿಂಸೆಗೆ ತಿಲಾಂಜಲಿ ಹಾಕುವ ನಿಟ್ಟಿನಲ್ಲಿ ಪ್ರಾಣಿ ದಯಾ ಸಂಘಗಳು ನಡೆಸುತ್ತಿದ್ದ ಅಭಿಯಾನಕ್ಕೆ ಕೊನೆಗೂ ಯಶಸ್ಸು ಲಭಿಸಿದೆ. ಇದರ ಜೊತೆಗೆ ಸರ್ಕಾರದ ಕಾರ್ಯದರ್ಶಿ, ಪರಿಸರ ಮತ್ತು ಅರಣ್ಯ ಇಲಾಖೆಗೆ ರಾಜ್ಯದೆಲ್ಲೆಡೆ ಬಂಧಿತ ಆನೆಗಳನ್ನು ತಪಾಸಣೆ ಮಾಡುವಂತೆ ಸೂಚನೆ ನೀಡಲಾಗಿದೆ.
60 ವರ್ಷದ ಲಲಿತಾ ಎಂಬ ಹೆಣ್ಣು ಆನೆಯ ನಿರ್ವಹಣೆಯ ಕುರಿತಂತೆ ಮದುರೈ ಶಾಖೆಯಲ್ಲಿ ಅರಣ್ಯ ಇಲಾಖೆ ದಾಖಲಿಸಿದ್ದ ಪ್ರಕರಣದಲ್ಲಿ ಈ ಆದೇಶ ನೀಡಲಾಗಿದೆ. ಆನೆಯನ್ನು ಮಾವುತರಿಂದ ಬೇರ್ಪಡಿಸದೆ ಆನೆಯನ್ನು ಮಾವುತನ ಆರೈಕೆಯಲ್ಲಿ ಮುಂದುವರಿಸಬೇಕು ಎಂದು ಹೈಕೋರ್ಟ್ನ ಏಕಸದಸ್ಯ ಪೀಠ ಸೂಚನೆ ನೀಡಿದೆ. ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಇತ್ತೀಚೆಗೆ ಕಾರ್ಯಕರ್ತರೊಂದಿಗೆ ಲಲಿತಾ ಆನೆಯನ್ನು ಭೇಟಿ ಮಾಡಿದ್ದು, ಈ ಸಂದರ್ಭ ಆನೆಯ ದೇಹದ ಮೇಲೆ ಗಾಯಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ವೇಳೆ ಪಶುಸಂಗೋಪನಾ ಇಲಾಖೆಯ ನೆರವಿನಿಂದ ಆನೆಯ ಆರೈಕೆ ಮಾಡುವಂತೆ ವಿರುದುನಗರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಹೆಚ್ಚಿನ ದೇವಾಲಯಗಳಲ್ಲಿ ಆನೆಗಳು(Elephant) ದುರ್ಜನ ಸ್ಥಿತಿಯಲ್ಲಿದ್ದು, ಕಾಂಕ್ರೀಟ್ ನೆಲಹಾಸು, ತವರದ ಶೀಟ್ ಛಾವಣಿ, ಕಟ್ಟಿ ಹಾಕಿದ ಸ್ಥಿತಿ, ಆಹಾರದ ಕೊರತೆಯಿಂದ ಜೊತೆಗೆ ದಿನವಿಡೀ ಕಾಲ ಸರಪಳಿಯಲ್ಲಿ ಬಂಧಿಯಾಗಿ ಆನೆಗಳ ಜೀವನ ನರಕದಂತೆ ಆಗಿರುವ ಬಗ್ಗೆ ನ್ಯಾಯಾಧೀಶರು ಮನವರಿಕೆ ಮಾಡಿಕೊಂಡಿದ್ದಾರೆ. ಅದರಲ್ಲಿಯೂ ಕೆಲ ಕುಡುಕ ಮಾವುತರು ಆನೆಗಳನ್ನು ಅಮಾನುಷವಾಗಿ ನಡೆಸಿಕೊಂಡು ಕ್ರೌರ್ಯ ಮೆರೆಯುತ್ತಿದ್ದಾರೆ. ಅಷ್ಟೆ ಅಲ್ಲದೇ, ತಮ್ಮ ಕುಟುಂಬದಿಂದ ದೂರವಾಗಿ ಹಿಂಸೆಯನ್ನು ತಾಳಲಾರದೆ ಕೆಲ ಪ್ರಾಣಿಗಳು ಆಕ್ರಮಣಕಾರಿ ಹಾಗೂ ಹಿಂಸಾತ್ಮಕ ಪ್ರವೃತ್ತಿ ರೂಡಿಸಿ ಕೊಳ್ಳುವಂತೆ ಆಗುತ್ತದೆ ಎಂದು ನ್ಯಾಯಮೂರ್ತಿ ಸ್ವಾಮಿನಾಥನ್ ಹೇಳಿದ್ದಾರೆ.
ಹಿಂದೂ ಧರ್ಮದ( Hindu) ಅನುಸಾರ ಗಜರಾಜನಿಗೆ(Elephant) ವಿಶೇಷ ಗೌರವ ನೀಡಲಾಗುತ್ತದೆ. ಅನೇಕ ರಾಜ್ಯಗಳಲ್ಲಿ ಉತ್ಸವಗಳು ಮತ್ತು ಮೆರವಣಿಗೆಗಳಲ್ಲಿ ಆನೆಗಳನ್ನು ಬಳಸುವ ಕ್ರಮ ಈಗಲೂ ಮುಂದುವರಿಯುತ್ತಿದೆ. ಕೇರಳ ರಾಜ್ಯದಲ್ಲಿ ಮೆರವಣಿಗೆಗಳು ಸೇರಿದಂತೆ ಹಲವು ಉತ್ಸವಗಳಲ್ಲಿ ಹೆಚ್ಚು ಆನೆಗಳನ್ನು ಬಳಕೆ ಮಾಡಲಾಗುತ್ತದೆ. 2019 ರ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಸುಮಾರು 2,450 ಬಂಧಿತ ಆನೆಗಳಿವೆ. ಅಸ್ಸಾಂ 905 ಬಂಧಿತ ಆನೆಗಳಿದ್ದು, ಕೇರಳದಲ್ಲಿ 518 ಆನೆ ಬಂಧಿತ ಆನೆಗಳಿದ್ದು, ಎರಡನೇ ಸ್ಥಾನದಲ್ಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪರಿಸರ ಮತ್ತು ಅರಣ್ಯ ಇಲಾಖೆಯ ಕಾರ್ಯದರ್ಶಿಗಳು ಮಾನವ ಸಂಪನ್ಮೂಲ ಮತ್ತು ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲು ಮುಖ್ಯ ನ್ಯಾಯಮೂರ್ತಿ ಸ್ವಾಮಿನಾಥನ್ ನಿರ್ದೇಶನ ಮಾಡಿದ್ದಾರೆ ಎನ್ನಲಾಗಿದೆ.
