Thiruvananthapuram Lottery Ticket: ಕುರುಡು ಕಾಂಚಾಣದ ವ್ಯಾಮೋಹ ಯಾರಿಗಿಲ್ಲ ಹೇಳಿ!! ಹಣ ಮಾಡಬೇಕು, ಶ್ರೀಮಂತರಾಗಬೇಕು ಎಂದು ಎಲ್ಲರೂ ಬಯಸುವುದು ಸಹಜ.ಆದ್ರೆ, ಅದೃಷ್ಟ ಲಕ್ಷ್ಮೀ ಸುಲಭವಾಗಿ ಎಲ್ಲರ ಕೈ ಹಿಡಿಯುವುದಿಲ್ಲ. ನಸೀಬು ಚೆನ್ನಾಗಿದ್ದರೆ ಮಾತ್ರ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ. ಅದಕ್ಕೆ ನಿದರ್ಶನ ಅನ್ನೋ ಹಾಗೆ ಇಂಟ್ರೆಸ್ಟಿಂಗ್ ಕಹಾನಿಯೊಂದು ವರದಿಯಾಗಿದೆ.
ತಿರುವನಂತಪುರಂನಲ್ಲಿ (Thiruvananthapuram)ಈ ವರ್ಷ 25 ಕೋಟಿ ರೂ. ಓಣಂ ಬಂಪರ್ ಲಾಟರಿ( Thiruvananthapuram Lottery Ticket) ಗೆದ್ದವರಿಗೆ ಇನ್ನು ಹಣ ಕೈಗೆ ತಲುಪಿಲ್ಲವಂತೆ . ಈ ಹಣ ಸಿಗುವವರೆಗೆ ಕಾಯಬೇಕಾದ ಸ್ಥಿತಿ ಎದುರಾಗಿದೆ. ತಮಿಳುನಾಡು ಮೂಲದ ಪಾಂಡ್ಯರಾಜ್ ಮತ್ತು ಇತರ ಮೂವರು ಸ್ನೇಹಿತರು ಈ ಬಾರಿಯ ಓಣಂ ಬಂಪರ್ ಲಾಟರಿ ಗೆದ್ದವರಾಗಿದ್ದು, ವಾಳಯಾರ್ನಲ್ಲಿ ಟಿಕೆಟ್ ಖರೀದಿಸಿರುವುದಾಗಿ ಬಹುಮಾನ ವಿಜೇತ ಪಾಂಡ್ಯರಾಜ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಬಹುಮಾನ ಟಿಕೆಟ್ ಅನ್ನು ಕೇರಳದಿಂದ ತಂದು ತಮಿಳುನಾಡಿನ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ ಎಂದು ತಮಿಳುನಾಡು ಮೂಲದವರೊಬ್ಬರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಲಾಟರಿ ಇಲಾಖೆ ತನಿಖೆ ನಡೆಸಲು ಮುಂದಾಗಿದೆ.
ಕೇರಳ ಲಾಟರಿಯನ್ನು (Kerala Lottery)ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಲು ಕಾನೂನಿನ ಪ್ರಕಾರ ಅವಕಾಶವಿಲ್ಲ.ಹೀಗಾಗಿ, ಬಹುಮಾನ ವಿಜೇತರು ಕೇರಳಕ್ಕೆ ಬರಲು ಕಾರಣಗಳನ್ನೂ ಪರಿಶೀಲಿಲಿಸಿ ಬಹುಮಾನ ವಿಜೇತರು ಲಾಟರಿ ಖರೀದಿ ಮಾಡಿರುವ ಏಜೆನ್ಸಿಯಲ್ಲಿ ವಿಚಾರಣೆ ನಡೆಸಿ, ಅಲ್ಲಿ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಯಾವುದೇ ದೂರುಗಳಿಲ್ಲದಿದ್ದರೂ, ಲಾಟರಿ ಬಹುಮಾನವನ್ನು ಬೇರೆ ರಾಜ್ಯದವರು ಪಡೆದಿದ್ದರೆ ಆ ಸಂದರ್ಭದಲ್ಲಿ ಸಮಿತಿ ಪರಿಶೀಲಿಸಿದ ಬಳಿಕವೇ ಬಹುಮಾನವನ್ನು ಹಸ್ತಾಂತರ ಮಾಡಲಾಗುತ್ತದೆ. ಈ ನಡುವೆ ತಮಿಳುನಾಡು ಮೂಲದ ಪಾಂಡ್ಯರಾಜ್, ನಟರಾಜ್, ಕುಪ್ಪುಸಾಮಿ ಮತ್ತು ರಾಮಸ್ವಾಮಿ ತಿರುವಂತಪುರಂಗೆ ಭೇಟಿ ನೀಡಿ ಪಾಲಕ್ಕಾಡ್ ಬಾವಾ ಕೇಂದ್ರದಿಂದ ಖರೀದಿ ಮಾಡಿದ ಓಣಂ ಬಂಪರ್ ಲಾಟರಿಯನ್ನು ಇಲಾಖೆಗೆ ಹಸ್ತಾಂತರಿಸಿದ್ದಾರೆ.
25 ಕೋಟಿ ರೂ. ಮೌಲ್ಯದ ಟಿಕೆಟ್ ತಮಿಳುನಾಡಿನ ಕಾಳಸಂತೆಯಲ್ಲಿ ಮಾರಾಟವಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಲಾಟರಿ ಇಲಾಖೆ ತನಿಖೆ ನಡೆಸಲು ಮುಂದಾಗಿದ್ದು, ಜಂಟಿ ನಿರ್ದೇಶಕರು ಮತ್ತು ಹಣಕಾಸು ಅಧಿಕಾರಿಯನ್ನು ಒಳಗೊಂಡ ಏಳು ಸದಸ್ಯರ ತಂಡದ ತನಿಖಾ ವರದಿಯ ಆಧಾರದ ಮೇರೆಗೆ ಮೊದಲ ಬಹುಮಾನ ವಿಜೇತ ಭವಿಷ್ಯ ನಿರ್ಣಯವಾಗಲಿದೆ.
