ಟ್ರಾಫಿಕ್ ರೂಲ್ಸ್ ಅನ್ನು ಬ್ರೇಕ್ ಮಾಡಿ, ನೀವೇನಾದರೂ ದಂಡದ ಮೊತ್ತವನ್ನು ಬಾಕಿ ಉಳಿಸಿದ್ದೀರಾ? ಹಾಗಾದ್ರೆ, ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಹೌದು, ಸಂಚಾರ ನಿಯಮ ಉಲ್ಲಂಘಿಸಿ, ದಂಡದ ಮೊತ್ತವನ್ನು ಕಟ್ಟದೆ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಸರಕಾರವು ಭರ್ಜರಿ ರಿಯಾಯಿತಿ ಘೋಷಿಸಿದೆ. ಶೇಕಡ 50ರ ತನಕ ರಿಯಾಯಿತಿಯನ್ನು ನೀಡುವ ಬಗ್ಗೆ ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಆದೇಶವನ್ನು ಹೊರಡಿಸಿದ್ದಾರೆ .
1300 ಕೋಟಿ ರೂ.ಗೂ ಅಧಿಕ ದಂಡದ ಮೊತ್ತ ಬಾಕಿ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಹಾಗೂ ಇದರಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕಳೆದ ಜ.27ರಂದು, ರಾಜ್ಯ ಹೈಕೋರ್ಟ್ನ ನ್ಯಾಯಾಧೀಶರಾದ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಈ ಬಗ್ಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ನ್ಯಾಯಮೂರ್ತಿಗಳ ಮನವಿ ಮೇರೆಗೆ ಈ ಆದೇಶವನ್ನು ರಾಜ್ಯ ಸರ್ಕಾರವು ಹೊರಡಿಸಿದೆ.
ಈ ಆದೇಶವು ದಂಡದ ಮೊತ್ತ ಬಾಕಿ ಉಳಿಸಿಕೊಂಡಿರುವವರು ಫೆ.11ರೊಳಗೆ ಟ್ರಾಫಿಕ್ ಫೈನ್ ಕಟ್ಟಿದರೆ ಮಾತ್ರ ಅನ್ವಯವಾಗಲಿದೆ. ಅಂತಹವರು ರಿಯಾಯಿತಿ ಪಡೆಯಬಹುದಾಗಿದೆ. ಇದು ಸೀಮತ ಅವಧಿಯಲ್ಲಿ ನಡೆಯಲಿದ್ದು, ಈ ಮೂಲಕ ನಿಗದಿತ ದಿನಾಂಕದೊಳಗೆ, ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿ ದಂಡವನ್ನು ಪಾವತಿ ಮಾಡದೇ ತಪ್ಪಿಸಿಕೊಂಡು ಓಡಾಡುತ್ತಿರುವವರು ಮುಂದಿನ ಕಾನೂನಿನ ಏಟಿನಿಂದ ಬಚಾವ್ ಆಗಲು ಇದು ಸುವರ್ಣ ಅವಕಾಶವನ್ನು ನೀಡಿದೆ.
ಫೆ.11ರ ರಾಜ್ಯವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈ ರಿಯಾಯಿತಿಯ ನಿರ್ಧಾರವನ್ನು ಮಾಡಿದೆ ಎನ್ನಲಾಗಿದೆ.
