Home » ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೋಟೆಲ್‌ನಲ್ಲಿ ಉಪಹಾರ ಸೇವಿಸುತ್ತಿದ್ದ ಮಹಿಳೆಯ ಬ್ಯಾಗ್ ಕಳ್ಳತನ | ಆರೋಪಿ ಬೆಂಗಳೂರಿನಲ್ಲಿ ಪೊಲೀಸ್ ಬಲೆಗೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೋಟೆಲ್‌ನಲ್ಲಿ ಉಪಹಾರ ಸೇವಿಸುತ್ತಿದ್ದ ಮಹಿಳೆಯ ಬ್ಯಾಗ್ ಕಳ್ಳತನ | ಆರೋಪಿ ಬೆಂಗಳೂರಿನಲ್ಲಿ ಪೊಲೀಸ್ ಬಲೆಗೆ

by Praveen Chennavara
1 comment

ಕಡಬ : ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರವಾಸಿಗರ ಸೋಗಿನಲ್ಲಿ ಚಿನ್ನಾಭರಣ ಕದ್ದ ಆರೋಪದಲ್ಲಿ ಮಹಿಳೆಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ,ಆಕೆಯ ಗೆಳೆಯ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಯಶವಂತಪುರ ಠಾಣೆಯ ಪೊಲೀಸರು ಮಮತಾ (38) ಎಂಬಾಕೆಯನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಸಹಕರಿಸಿದ ಈಕೆಯ ಗೆಳೆಯ ಪರಾರಿಯಾಗಿದ್ದಾನೆ.

ಬಂಧಿತ ಮಮತಾಳಿಂದ 20.2 ಲಕ್ಷ ಮೌಲ್ಯದ 439 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಮತಾ ಮೂಲತಃ‌ ಆಂಧ್ರ ಪ್ರದೇಶ ಮೂಲದವಳು. 2 ವರ್ಷದ ಹಿಂದೆ ಈಕೆಯ ಗಂಡ ಸಾವನ್ನಪ್ಪಿದ್ದ ಬಳಿಕ ಮತ್ತೊಬ್ಬ ವ್ಯಕ್ತಿಯ ಜೊತೆ ಸಲುಗೆ ಬೆಳೆಸಿಕೊಂಡು ಮದುವೆಯಾಗಲು ನಿರ್ಧಾರ ಮಾಡಿದ್ದಳು.

‌‌ಮಮತಾ ತನ್ನ ಗೆಳೆಯನೊಂದಿಗೆ ಪ್ರವಾಸಿಗರ ಸೋಗಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಸಾಮಾನ್ಯರಂತೆ ಹೋಗುತ್ತಿದ್ದಳು. ಅಲ್ಲಿ ಶ್ರೀಮಂತರನ್ನ ಗುರುತು ಮಾಡಿ ಹಿಂಬಾಲಿಸುತ್ತಿದ್ದಳು. ಅಲ್ಲಿ ದೇವರ ದರ್ಶನದ ವೇಳೆ ಜನರ ಬ್ಯಾಗ್ ಗಳಿಗೆ ಹೊಂಚು ಹಾಕುತ್ತಿದ್ದ ಮಮತಾ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಳು ಎಂಬ ಮಾಹಿತಿ ದೊರಕಿದೆ.

ಕಳ್ಳತನಗೈದ ಬಳಿಕ ಬೆಂಗಳೂರಿಗೆ ಬಂದು ಚಿನ್ನ ಅಡವಿಟ್ಟು ಸಾಲ ಪಡೆದುಕೊಳ್ಳುತ್ತಿದ್ದಳು. ಸದ್ಯ ಪೊಲೀಸರಿಗೆ ತನಿಖೆ ವೇಳೆ ಕುಕ್ಕೆ ಸುಬ್ರಹ್ಮಣ್ಯ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಈಕೆ ನೇರ ಭಾಗಿಯಾಗಿದ್ದಾಳೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment