Home » ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೂ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಮನವಿ

ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೂ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಮನವಿ

by Praveen Chennavara
0 comments

ಉಡುಪಿ : ಜಾತ್ರಾ ಮಹೋತ್ಸವದಲ್ಲಿ ಯಾವುದೇ ತಾರತಮ್ಯ ಮಾಡದೆ ಮುಸ್ಲಿಮ್ ವ್ಯಾಪಾರಿಗಳಿಗೂ ವ್ಯಾಪಾರ ನಡೆಸಲು ಅವಕಾಶ ಮಾಡಿ ಕೊಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈ
ಗೊಂದಲವನ್ನು ಪರಿಹರಿಸಿ ಸೌಹಾರ್ದತೆಯ ವಾತಾವರಣವನ್ನು ನಿರ್ಮಿಸಬೇಕು ಎಂದು ಉಡುಪಿ ಜಿಲ್ಲಾ ಬೀದಿಬದಿ ಹಾಗೂ ಜಾತ್ರಾ ವ್ಯಾಪಾರಸ್ಥರ ಒಕ್ಕೂಟ ಒತ್ತಾಯಿಸಿದೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರೀಫ್, ಈ ಬಾರಿ ಕಾಪು ಮಾರಿಪೂಜೆ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡದೆ ಇರುವುದು ನಮಗೆ ತುಂಬಾ ಬೇಸರ ಆಗಿದೆ. ಉಡುಪಿ ಸೌಹಾರ್ದತೆಯ ಜಿಲ್ಲೆ. ಇಲ್ಲಿ ಯಾವತ್ತೂ ಧರ್ಮಗಳ ಮಧ್ಯೆ ಯಾವುದೇ ಸಂಘರ್ಷಗಳು ನಡೆದಿಲ್ಲ ಎಂದರು.

ಮುಸ್ಲಿಮರು ಹಿಬಾಜ್ ಪ್ರಕರಣದ ತೀರ್ಪಿಗೆ ಸಂಬಂಧಿಸಿ ಬಂದ್ ಮಾಡಿದ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ನಾವು ಯಾವತ್ತೂ ಯಾವುದೇ ರೀತಿ ಬಂದ್ ಮಾಡಿಲ್ಲ. ಆ ದಿನ ಕೂಡ ನಾವು ಎಲ್ಲರೂ ವ್ಯಾಪಾರ ಮಾಡಿದ್ದೇವೆ. ಯಾಕೆಂದರೆ ನಾವು ದಿನಗೂಲಿಯಲ್ಲಿ ಬದುಕು ನಡೆಸುವವರು. ಒಂದು ದಿನ ಕೆಲಸ ಮಾಡದಿದ್ದರೆ ಉಪವಾಸ ಮಲಗುವ ಸ್ಥಿತಿ ನಮ್ಮದು. ನಮ್ಮ ದುಡಿಮೆಯನ್ನೇ ನಂಬಿ ನಮ್ಮ ಕುಟುಂಬ ಗಳಿವೆ ಎಂದು ಅವರು ಹೇಳಿದರು.

ಈ ಹಿಂದೆ ಕೊರೋನದಿಂದಾಗಿ ಸುಮಾರು ಎರಡು ವರ್ಷ ನಾವು ವ್ಯಾಪಾರ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇವು. ಇದೀಗ ಜಾತ್ರೆಗಳಲ್ಲಿ ನಮಗೆ ವ್ಯಾಪಾರ ಮಾಡಲು ಬಿಡದೆ ತುಂಬಾ ಕಷ್ಟ ಆಗುತ್ತಿದೆ. ನಮಗೆ ಬೇರೆ ಕೆಲಸ ಮಾಡುವ ಶಕ್ತಿ ಇಲ್ಲ. ಜಾತ್ರೆಯನ್ನೇ ನಂಬಿಕೊಂಡು ವ್ಯಾಪಾರ ಮಾಡು ತ್ತಿದ್ದೇವೆ. ಹಾಗಾಗಿ ನಮಗೆ ಈ ಬಾರಿ ಕೂಡ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.

ದೇವಸ್ಥಾನದ ಆಡಳಿತ ಮಂಡಳಿಯವರು ಸೂಚಿಸಿದ ಜಾಗದಲ್ಲಿ ನಾವು ಸುಂಕ ನೀಡಿ ವ್ಯಾಪಾರ ಮಾಡುತ್ತೇವೆ. ದೇವಸ್ಥಾನಕ್ಕೆ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ. ಹಿಂದೂ ಸಮಾಜೋತ್ಸವ ನಡೆದ ಸಂದರ್ಭದಲ್ಲಿ ನಾವು ಹಿಂದೂ ಬಾಂಧವರಿಗೆ ತಂಪು ಪಾನೀಯಗಳನ್ನು ನೀಡುವ ಮೂಲಕ ಸೌಹಾರ್ದ ಮೆರೆದಿದ್ದೇವೆ. ಆದುದರಿಂದ ಜಿಲ್ಲಾಡಳಿತ ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಿ ನಮಗೆ ವ್ಯಾಪಾರ ನಡೆಸಲು ಅವಕಾಶ ಮಾಡಿ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಉಪಾಧ್ಯಕ್ಷ ಮುಹಮ್ಮದ್ ಇಬ್ರಾಹಿಂ, ತೌಫಿಕ್, ಹಮೀದ್ ನೇಜಾರು, ಶಾಹಿದ್ ನೇಜಾರ್, ಯಾಸೀನ್ ಕೆಮ್ಮಣ್ಣು, ಮುಹಮದ್ ಅಖಿಲ್ ಸಾಸ್ತಾನ್ ಮೊದಲಾದವರಿದ್ದರು.

You may also like

Leave a Comment