ತಿರುಪತಿ: ತಿರುಪತಿ ಶ್ರೀ ವೆಂಕಟೇಶ್ವರ ದೇಗುಲದಿಂದ ಕಳವಳಕಾರಿ ಸುದ್ದಿ ಬಂದಿದೆ. ಇದೀಗ ಕಳಪೆ ತುಪ್ಪ ಪೂರೈಕೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ನಕಲಿ ತುಪ್ಪ ಬಳಸಿ ಸುಮಾರು 20 ಕೋಟಿ ಲಡ್ಡುಗಳನ್ನು ತಯಾರಿಸಿ, ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಒಂದು ಲಂಡನ್ನು ಮೂರು ಜನ ಹಂಚಿಕೊಂಡು ತಿಂದರೂ ಎಂದುಕೊಂಡರು ಕೂಡಾ, ದೇಶದ ಸುಮಾರು ಅರ್ಧಕರ್ಧ ಜನರಿಗೆ ಕಲಬೆರಕೆ ಲಡ್ಡು ತಿನ್ನಿಸಲಾಗಿದೆ.
2019ರಿಂದ 2024ರ ಅವಧಿಯಲ್ಲಿ ಒಟ್ಟು 48.76 ಕೋಟಿ ಲಡ್ಡುಗಳನ್ನು ಹಂಚಲಾಗಿದೆ, ಈ ಪೈಕಿ 20 ಕೋಟಿ ಲಡ್ಡುಗಳು ನಕಲಿ ತುಪ್ಪದಿಂದ ತಯಾರಿಸಲ್ಪಟ್ಟಿದ್ದವು ಎಂದು ದೇಗುಲ ನಿರ್ವಹಣಾ ಸಮಿತಿ ಟಿಟಿಡಿಯ ಅಧ್ಯಕ್ಷ ಬಿ.ಆರ್. ನಾಯ್ಡು ಹೇಳಿಕೆ ನೀಡಿದ್ದಾರೆ. ದೇಗುಲಕ್ಕೆ ಪ್ರತಿದಿನ ಬಂದಿದ್ದ ಭಕ್ತರ ಸಂಖ್ಯೆ, ತುಪ್ಪ ಸಂಗ್ರಹಣೆಯ ವಿವರ, ಲಡ್ಡು ತಯಾರಿಕೆ ಹಾಗೂ ಮಾರಾಟದ ಸಮಗ್ರ ಅಂಕಿ ಅಂಶಗಳನ್ನು ಲೆಕ್ಕಾಚಾರ ಹಾಕಿ ಈ ಮಾಹಿತಿ ಪಡೆಯಲಾಗಿದೆ.
ಹೆಚ್ಚಿನ ಲಡ್ಡುಗಳನ್ನು ತಾಳೆ ಎಣ್ಣೆ ಮತ್ತು ಪ್ರಾಣಿಜನ್ಯ ಕೊಬ್ಬಿನಿಂದ ಕೂಡಿದ್ದ ನಕಲಿ ತುಪ್ಪದಿಂದ ತಯಾರಿಸಲಾಗಿದ್ದು, ಈ ಲಡ್ಡುಗಳು ಯಾರ್ಯಾರಿಗೆ ತಲುಪಿರಬಹುದು ಎಂದು ನಿರ್ಧರಿಸಲು ಯಾವುದೇ ಮಾರ್ಗವಿಲ್ಲ. ಅದೇ ರೀತಿ ವಿವಿಐಪಿ ಲಡ್ಡುಗಳನ್ನು ಕೂಡ ಈ ಅವಧಿಯಲ್ಲಿ ಯಾವ ತುಪ್ಪ ಬಳಸಿ ತಯಾರಿಸಲಾಗಿತ್ತು ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಟಿಟಿಡಿ ಅಸಹಾಯಕತೆ ವ್ಯಕ್ತಪಡಿಸಿದೆ.
