Home » Hospital: ಬಾಯಿ ಹುಣ್ಣು ಎಂದು ಆಸ್ಪತ್ರೆಗೆ ದಾಖಲಾದ 9 ವರ್ಷದ ಬಾಲಕ – ಆದರೆ ಬಾಲಕನಿಗೆ ವೈದ್ಯರು ಮಾಡಿದ್ದು ಸುನ್ನತಿ

Hospital: ಬಾಯಿ ಹುಣ್ಣು ಎಂದು ಆಸ್ಪತ್ರೆಗೆ ದಾಖಲಾದ 9 ವರ್ಷದ ಬಾಲಕ – ಆದರೆ ಬಾಲಕನಿಗೆ ವೈದ್ಯರು ಮಾಡಿದ್ದು ಸುನ್ನತಿ

0 comments

Hospital: ಚೆನ್ನೈನಲ್ಲಿ ಬಾಯಿ ಹುಣ್ಣು ಎಂದು ಆಸ್ಪತ್ರೆಗೆ ದಾಖಲಾಗಿದ್ದ ವಿಜಯ್ ಆನಂದ್ ಎಂಬುವವರ 9 ವರ್ಷದ ಮಗನಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ಆತನ ಶಿಶ್ನದ ಚರ್ಮ ಕತ್ತರಿಸಿದ್ದಾರೆ ಅಂದರೆ ತಪ್ಪಾಗಿ ಸುನ್ನತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ರಾಯಪೇಟೆಯ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಮಹಮ್ಮದ್ ಒವೈಸಿ ವಿರುದ್ಧ ಐಸ್ ಹೌಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಪ್ಪಾದ ಶಸ್ತ್ರಚಿಕಿತ್ಸೆ ಮಾಡಿದ ಕುರಿತು ಬಾಲಕನ ತಂದೆಗೆ ವೈದ್ಯರು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ಸಮರ್ಪಕ ಉತ್ತರ ನೀಡಿಲ್ಲ ಎಂದು ವರದಿಯಾಗಿದೆ.

ಬಾಧಿತ ಬಾಲಕನ ಸಂಬಂಧಿಕರು, ಆಸ್ಪತ್ರೆ ಅಧಿಕಾರಿಗಳು ಮತ್ತು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಮಾಹಿತಿಯ ಆಧಾರದ ಮೇಲೆ, ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ. ನಂತರ, ಅಧಿಕಾರಿಗಳು ಮೊಹಮ್ಮದ್ ಓವೈಸಿ (24) ಎಂದು ಗುರುತಿಸಲಾದ ವೈದ್ಯರನ್ನು ಬಂಧಿಸಿದರು.

ಪೊಲೀಸ್ ಮೂಲಗಳ ಪ್ರಕಾರ, ವೈದ್ಯರು ಬಾಲಕನನ್ನು ಸುನ್ನತಿ ಮಾಡಬೇಕಾದ ಇನ್ನೊಬ್ಬ ರೋಗಿಯೆಂದು ತಪ್ಪಾಗಿ ಭಾವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಡಾ. ಓವೈಸಿ ವಿರುದ್ಧ ಬಿಎನ್ಎಸ್ ಸೆಕ್ಷನ್ 125 (2) (ಇತರರ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯ) ಮತ್ತು 351 (3) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಏತನ್ಮಧ್ಯೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೂಡ ಆಸ್ಪತ್ರೆ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

You may also like