ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪದ ಕುರಿತು ವರದಿಯಾಗಿದೆ. ನ್ಯಾಯಾಲಯದ ಆದೇಶವನ್ನು ಮೀರಿ ಮಠದ ಆಸ್ತಿಯನ್ನು ಮಾರಾಟ ಮಾಡಿದ ಆರೋಪ ಕೇಳಿ ಬಂದಿದೆ.
ಎರಡು ಕೋಟಿ ರೂಪಾಯಿ ಮೌಲ್ಯದ ಒಟ್ಟು ನಾಲ್ಕು ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿರುವ ನಾಲ್ಕು ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.
ಮಂಜುನಾಥ ಎಂಬುವವರಿಗೆ ಸ್ಪೆಷಲ್ ಜಿಪಿಎ ನೀಡಿ ನಿವೇಶನ ಮಾರಾಟ ಮಾಡಲಾಗಿದೆ. ಶರಣರು ಪೋಕ್ಸೋ ಪ್ರಕರಣದ ಆರೋಪಿಯಾದ ನಂತರ ನ್ಯಾಯಾಲಯವು ನಿರ್ಬಂಧ ವಿಧಿಸಿದೆ. ರಾಜ್ಯ ಸರಕಾರದಿಂದ ಮಠಕ್ಕೆ ಆಡಳಿತ ಸಮಿತಿಯನ್ನು ನೇಮಕ ಮಾಡಲಾಗಿದೆ.
ಪ್ರಕಾಶ್ ಎಂಬುವವರಿಂದ ಆಡಳಿತ ಸಮಿತಿಗೆ ನಿವೇಶನಗಳ ಮಾರಾಟ ಕುರಿತಾಗಿ ದೂರು ನೀಡಲಾಗಿದೆ. ಆಡಳಿತ ಸಮಿತಿ ಅಧ್ಯಕ್ಷ ಶಿವಯೋಗಿ ಕಳಸದ್ ಅವರಿಗೆ ದೂರು ನೀಡಲಾಗಿದ್ದು, ಕಾನೂನು ತಜ್ಞರಿಂದ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ ಎನ್ನಲಾಗಿದೆ.
