Home » Atal Pension Yojana : ತೆರಿಗೆದಾರರೇ ನಿಮಗೆ ಅಟಲ್ ಪಿಂಚಣಿ ಯೋಜನೆ ಬಂದ್| ಅ.1 ರಿಂದ ಹೊಸ ನಿಯಮ ಜಾರಿ

Atal Pension Yojana : ತೆರಿಗೆದಾರರೇ ನಿಮಗೆ ಅಟಲ್ ಪಿಂಚಣಿ ಯೋಜನೆ ಬಂದ್| ಅ.1 ರಿಂದ ಹೊಸ ನಿಯಮ ಜಾರಿ

by Mallika
0 comments

2015ರ ಜೂನ್ 1ರಂದು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ದೃಷ್ಟಿಯ ಕಾರಣದಿಂದ ಪರಿಚಯಿಸಲಾದ ಅಟಲ್ ಪಿಂಚಣಿ ಯೋಜನೆಗೆ (ಎಪಿವೈ) ಅಕ್ಟೋಬರ್ 1ರಿಂದ ಆದಾಯ ತೆರಿಗೆ ಪಾವತಿಸುವ ನಾಗರಿಕರು ನೋಂದಣಿ ಮಾಡಿಕೊಳ್ಳುವಂತಿಲ್ಲ. ಈ ಸಂಬಂಧ ಕೇಂದ್ರ ಹಣಕಾಸು ಇಲಾಖೆಯು ಅಧಿಸೂಚನೆ ಪ್ರಕಟಿಸಿದ್ದು, ಸರಕಾರದ ಯೋಜನೆಗೆ ಫಲಾನುಭವಿಗಳ ಸಂಖ್ಯೆ ತಗ್ಗಲಿದೆ.

ಈ ಯೋಜನೆಯಡಿ 60 ವರ್ಷ ಮೇಲ್ಪಟ್ಟವರಿಗೆ ಆಯಾ ಕಾರ್ಮಿಕರ ಪಾಲಿನ ಕೊಡುಗೆ ಆಧರಿಸಿ ಕನಿಷ್ಠ 1 ರಿಂದ 5 ಸಾವಿರ ರೂ.ಗಳವರೆಗೆ ಪಿಂಚಣಿ ನೀಡಲಾಗುತ್ತದೆ.

ಅಕ್ಟೋಬರ್ 1ರಿಂದ ಯಾವೆಲ್ಲ ನಾಗರಿಕರು ಆದಾಯ ತೆರಿಗೆ ಪಾವತಿ ಮಾಡುತ್ತೀರೋ ಅವರು ಈ ಯೋಜನೆಗೆ ಸೇರಲು ಅರ್ಹತೆ ಹೊಂದುವುದಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಈ ಮೊದಲು ಹೊರಡಿಸಿದ್ದ ಅಧಿಸೂಚನೆಗೆ ತಿದ್ದುಪಡಿ ಮಾಡಿ, ಹೊಸ ಅಧಿಸೂಚನೆಯಲ್ಲಿ ತಿಳಿಸಿದೆ.

ಆದಾಯ ತೆರಿಗೆ ಕಾಯ್ದೆಯಡಿ 2.5 ಲಕ್ಷ ರೂ.ಗಳಿಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿದವರು ಯಾವುದೇ ಆದಾಯ ತೆರಿಗೆ ಪಾವತಿಸುವಂತಿಲ್ಲ. ಸರಕಾರದ ಕ್ರಮದಿಂದ ಬಹುತೇಕರಿಗೆ ಯೋಜನೆ ಸೇರ್ಪಡೆಗೆ ಅವಕಾಶ ಕೈತಪ್ಪಲಿದೆ.

ಆದರೆ ತಿದ್ದುಪಡಿಯಾದ ನಿಯಮವು 2022ರ ಅಕ್ಟೋಬರ್ 1ಕ್ಕಿಂತ ಮುಂಚಿತವಾಗಿ ಯೋಜನೆಯಡಿ ನೋಂದಣಿ ಮಾಡಿಕೊಂಡ ನಾಗರಿಕರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಒಂದು ವೇಳೆ ಅಕ್ಟೋಬರ್ 1ರಂದು ಅಥವಾ ತದನಂತರ ಯೋಜನೆಯಡಿ ಆದಾಯ ತೆರಿಗೆ ಪಾವತಿ ಮಾಡುವ ನಾಗರಿಕರು ಕೂಡ ನೋಂದಣಿ ಮಾಡಿಕೊಂಡರೆ ಅಂಥವರ ಖಾತೆಗಳನ್ನು ಮುಕ್ತಾಯಗೊಳಿಸಲಾಗುತ್ತದೆ. ಅಲ್ಲಿಯ ತನಕ ಸಂಗ್ರಹಗೊಂಡ ಮೊತ್ತವನ್ನು ಮರಳಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಟಲ್ ಪಿಂಚಣ ಯೋಜನೆಯ ಬಗ್ಗೆ :ಅಸಂಘಟಿತ ವಲಯದ ಕಾರ್ಮಿಕರು ಪಿಂಚಣಿ ಯೋಜನೆಗೆ ಸೇರಬಹುದು. ಅವರ ವಾರ್ಷಿಕ ಹೂಡಿಕೆಯ ಶೇ. 50 ರಷ್ಟು ಪಾಲಿನ ಹಣವನ್ನು ಅಥವಾ 1 ಸಾವಿರ ರೂ.ವರೆಗೆ ಕೇಂದ್ರ ಸರಕಾರವು ತನ್ನ ಕೊಡುಗೆ ನೀಡುತ್ತದೆ. ಅಟಲ್ ಪಿಂಚಣಿ ಯೋಜನೆಯಡಿ ಭಾರತದ 18 ರಿಂದ 40 ವರ್ಷದೊಳಗಿನ ನಾಗರಿಕರು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯುವ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.

You may also like

Leave a Comment