Home » Belthangady: ಧರ್ಮಸ್ಥಳ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಹೊಸ ದೂರುದಾರರನಿಂದ SIT ಗೆ ದೂರು

Belthangady: ಧರ್ಮಸ್ಥಳ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಹೊಸ ದೂರುದಾರರನಿಂದ SIT ಗೆ ದೂರು

0 comments

Belthangady: ಎಸ್‌ಐಟಿ ತನಿಖಾ ದಳಕ್ಕೆ ಶನಿವಾರ ಹೊಸ ದೂರುದಾರರೊಬ್ಬರು ದೂರು ನೀಡಲು ಬಂದಿರುವ ಘಟನೆ ನಡೆದಿದೆ. 15 ವರ್ಷಗಳ ಹಿಂದೆ ಬಾಲಕಿಯೊಬ್ಬಳ ಸಾವಿನ ಪ್ರಕರಣ ಚರ್ಚೆಗೆ ಬಂದಿದೆ.

ಸಾಮಾಜಿಕ ಹೋರಾಟಗಾರ, ಇಚಿಲಂಪಾಡಿ ನಿವಾಸಿ ಜಯನ್‌ ಟಿ. ಅವರು ಹೇಳಿದ್ದಾರೆನ್ನಲಾಗಿರುವ , ಕಾನೂನಿನ ಯಾವುದೇ ಕ್ರಮಗಳನ್ನು ಪಾಲಿಸದೆ ಬಾಲಿಯೊಬ್ಬಳ ಮೃತದೇಹವನ್ನು ಹೂಳಲಾಗಿದೆ ಎಂದು ಆರೋಪ ಮಾಡಿದ್ದು, ತನಿಖೆಗೆ ಆಗ್ರಹ ಮಾಡಿದ್ದಾರೆ.

ಸುಮಾರು 15 ವರ್ಷಗಳ ಹಿಂದೆ ಅನುಮಾನಾಸ್ಪದವಾಗಿ ಸಾವಿಗೀಡಾದ 15 ವರ್ಷದ ಬಾಲಕಿಯ ಶವವನ್ನು ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆ ಧರ್ಮಸ್ಥಳ ಗ್ರಾಮದಲ್ಲಿ ಹೂತು ಹಾಕಲಾಗಿದೆ. ಈ ಘಟನೆಗೆ ನಾನೇ ಪ್ರತ್ಯಕ್ಷದರ್ಶಿ ಎನ್ನುವ ಗಂಭೀರ ಆರೋಪವನ್ನು ಜಯನ್‌ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ ಎಂದು ವರದಿಯಾಗಿದೆ.

ಬಾಲಕಿಯ ಶವವನ್ನು ಹೂತಿರುವ ಜಾಗ ನನಗೆ ಈಗಲೂ ನಿಖರವಾಗಿ ಗೊತ್ತಿದೆ. ನಾನು ಎಸ್‌ಐಟಿ ಅಧಿಕಾರಿಗಳಿಗೆ ಆ ಸ್ಥಳ ತೋರಿಸಲು ಸಿದ್ಧನಿದ್ದೇನೆ. ಅದು ಕೊಲೆಯೋ ಅಥವಾ ಬೇರೆ ಏನೋ ಅದು ನನಗೆ ತಿಳಿದಿಲ್ಲ. ಶವ ಸ್ವಲ್ಪ ಕೊಳೆತ ಸ್ಥಿತಿಯಲ್ಲಿತ್ತು ಎಂದು ಅವರು ಹೇಳಿದ್ದಾರೆ.

ನನ್ನ ಕುಟುಂಬದ ಸದಸ್ಯೆಯಾದ ಪದ್ಮಲತಾ ಎಂಬುವವರ ಕೊಲೆಯಾದಾಗ ನಮಗೆ ನ್ಯಾಯ ದೊರೆಯಲಿಲ್ಲ. ಹಾಗಾಗಿ ವ್ಯವಸ್ಥೆ ಮೇಲೆ ನಂಬಿಕೆ ಇರಲಿಲ್ಲ. ಇದೀಗ ಎಸ್‌ಐಟಿ ರಚನೆಯಾಗಿದ್ದು, ತನಿಖೆಯ ಮೇಲೆ ನಂಬಿಕೆ ಬಂದಿದೆ. ಹಾಗಾಗಿ ನಾನು ಎಲ್ಲಾ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ದೂರು ನೀಡಲು ಬಂದಿದ್ದೇನೆ ಎಂದು ಜಯನ್‌ ಹೇಳಿದರು.

ಎಸ್‌ಐಟಿ ಅಧಿಕಾರಿಗಳಿಗೆ ಜಯನ್‌ ಅವರು ತಮ್ಮ ದೂರನ್ನು ನೀಡಿದ್ದು, ಸೋಮವಾರ ಬಂದು ವಿವರವಾದ ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

You may also like