

ಮಂಗಳೂರು: ದೋಷಯುಕ್ತ 4 ಜಿ ನೆಟ್ವರ್ಕ್ ನೀಡಿದ್ದ ಬಿಎಸ್ಎನ್ಎಲ್ ಕಂಪನಿಗೆ ದಂಡ ವಿಧಿಸಿ ಗ್ರಾಹಕನ ಪರ ದಕ್ಷಿಣ ಕನ್ನಡ ಗ್ರಾಹಕ ನ್ಯಾಯಾಲಯವು ತೀರ್ಪು ನೀಡಿರುವ ಘಟನೆ ನಡೆದಿದೆ.
ವಕೀಲ ವೃತ್ತಿಯನ್ನು ಮಂಗಳೂರಿನ ಮಾಡಿಕೊಂಡಿರುವ ವಕೀಲ ತೇಜ ಕುಮಾರ್ ಡಿ.ಯಂ ಅವರು ಬಿಎಸ್ಎನ್ಎಲ್ ಕಂಪನಿಯ ಸಿಮ್ ಅನ್ನು 2014 ರಿಂದ ಉಪಯೋಗ ಮಾಡುತ್ತಿದ್ದು, 2023 ರಿಂದ 4ಜಿ ನೆಟ್ವರ್ಕ್ ಸಿಮ್ಗೆ ವಿಸ್ತರಣೆ ಮಾಡಿದ್ದರು. ಆದರೆ ಕೆಲವು ತಿಂಗಳ ಬಳಿಕ 4ಜಿ ನೆಟ್ವರ್ಕ್ ಹಠಾತ್ತಾಗಿ ಸ್ಥಗಿತವಾಗುತ್ತಿತ್ತು, ಸ್ವಲ್ಪ ಸಮಯದ ನಂತರ 4ಜಿ ನೆಟ್ವರ್ಕ್ ಲಭ್ಯವಾಗುತ್ತಿತ್ತು. ಈ ಕುರಿತು ಗ್ರಾಹಕರು ಹಲವಾರು ಬಾರಿ ಕಂಪನಿಗೆ ದೂರನ್ನು ನೀಡಿದ್ದರು.
ಆದರೆ ಸಮಸ್ಯೆ ಬಗೆ ಹರಿಯದೆ ಗ್ರಾಹಕರು ಸಮಸ್ಯೆ ಎದುರಿಸುತ್ತಲೇ ಇದ್ದರು. ಸಮಸ್ಯೆ ಸರಿಪಡಿಸಲು ಹಳೆಯ ಬಿಎಸ್ಎಲ್ಎನ್ ಕಂಪನಿಯ ಸಿಮ್ ಅನ್ನು ಕಂಪನಿಯ ನಿರ್ದೇಶನದ ಮೇರೆಗೆ ಬದಲಾಯಿಸಿ 4ಜಿ ನೆಟ್ವರ್ಕ್ ಸಿಮ್ ಅನ್ನೂ ಖರೀದಿ ಮಾಡಿದರು. ಹೊಸ ಸಿಮ್ ಕಾರ್ಡ್ ಖರೀದಿ ಮಾಡಿದರೂ ಕೂಡಾ ಸಮಸ್ಯೆ ಎಂದಿನಂತೆ ಇತ್ತು.
ಈ ಹಿನ್ನೆಲೆಯಲ್ಲಿ ಗ್ರಾಹಕರು ಪರಿಹಾರ ಆಯೋಗಕ್ಕೆ ತೇಜ್ಕುಮಾರ್ ಮೊರೆ ಹೋಗಿದ್ದು, ಇವರು ಸಲ್ಲಿಸಿದ ದೂರನ್ನು ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯವು ಬಿಎಸ್ಎನ್ಎಲ್ ಸಂಸ್ಥೆಯು ನಿರಂತರವಾಗಿ ಗ್ರಾಹಕರಿಗೆ ನೀಡಬೇಕು. 4 ಜಿ ನೆಟ್ವರ್ಕ್ ಒದಗಿಸುವಲ್ಲಿ ನ್ಯೂನತೆ ತೋರಿದೆ ಎಂದು ತೀರ್ಪು ನೀಡಿತು.
ಪ್ರಮಾದ ಎಸಗಿದ ಬಿಎಸ್ಎನ್ಎಲ್ ಸಂಸ್ಥೆಯು ಅನಿರ್ಬಂಧಿತ 4ಜಿ ನೆಟ್ವರ್ಕ್ನ್ನು ನಿರಂತರವಾಗಿ ನೀಡಬೇಕು ಹಾಗೂ 4ಜಿ ನೆಟ್ವರ್ಕ್ ರಿಚಾರ್ಜ್ 3,880 ರು.ವನ್ನು ಶೇಕಡಾ 6ರ ಬಡ್ಡಿ ಮತ್ತು ಇದರ ಜೊತೆಗೆ ಸೇವಾ ನ್ಯೂನ್ಯತೆಗಾಗಿ 10,000 ರು. ದಂಡ ಹಾಗೂ ಪ್ರಕರಣದ ವೆಚ್ಚವಾಗಿ 5,000 ರು.ವನ್ನು 65 ದಿನದೊಳಗೆ ಪಾವತಿಸಲು ಆದೇಶ ನೀಡಿದೆ.













