ವೇಗವಾಗಿ ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅದರಲ್ಲಿದ್ದ ಕುಲಸಚಿವರು ಸ್ಥಳದಲ್ಲೇ ಸಾವಿನಪ್ಪಿದ್ದು, ಮತ್ತೊಂದೆಡೆ ಮರದಲ್ಲಿದ್ದ ಜೇನುನೊಣಗಳ ದಾಳಿಗೆ ಅವರ ಪುತ್ರ ಹಾಗೂ ಪತ್ನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಂತಾಗಿದೆ.
ಬೀದರಿನ ಬಸವಕಲ್ಯಾಣದ ಮುಡಬಿ ಬಳಿ ಈ ಕಾರು ಅಪಘಾತ ಸಂಭವಿಸಿದೆ. ಕಲಬುರಗಿಯ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಸಚಿವ ಲಿಂಗರಾಜ ಶಾಸ್ತ್ರಿ (50) ಮೃತಪಟ್ಟವರು. ಅವರ ಪತ್ನಿ ಶ್ರೀದೇವಿ, ಪುತ್ರ ಕೈಲಾಸ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸವಕಲ್ಯಾಣದಿಂದ ಕಲಬುರಗಿಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಮೂವರಷ್ಟೇ ಪ್ರಯಾಣಿಸುತ್ತಿದ್ದು, ವೇಗದಲ್ಲಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಶಾಸ್ತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆದರೆ ಮರದಲ್ಲಿದ್ದ ಜೇನುನೊಣಗಳ ದಾಳಿಯಿಂದ ಪುತ್ರ-ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯರು ಜೇನು ನೊಣಗಳಿಂದ ಕಾಪಾಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮುಡಬಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
