Uttara Kannada: ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆಯೊಂದು ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ನಿನ್ನೆ (ಫೆ.19) ನಡೆದಿದೆ.
ಶ್ರೀಕಾಂತ್ ರೆಡ್ಡಿ (37), ಚೈತ್ರ (31) ಹಾಗೂ ಏಳು ತಿಂಗಳ ಮಗು ಶ್ರೀಹಾನ್ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಚೈತ್ರಾ ಹಾಗೂ ಮಗು ಸ್ಥಳದಲ್ಲೇ ಮೃತ ಹೊಂದಿದ್ದು, ಶ್ರೀಕಾಂತ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಮೃತ ಕುಟುಂಬವು ಕೊಪ್ಪಳದಿಂದ ಪ್ರವಾಸಕ್ಕೆಂದು ಅಂಕೋಲಾ ಕಡೆಗೆ ಹೋಗುತ್ತಿದ್ದಾಗ ಅರಬೈಲ್ ಘಟ್ಟ ಬಳಿ ಲಾರಿಯೊಂದು ಓವರ್ಟೇಕ್ ಮಾಡುವ ಭರದಲ್ಲಿ ಎದುರಿನ ಕಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಪತಿ, ಪತ್ನಿ ಹಾಗೂ ಮಗು ಈ ಅಪಘಾತದಲ್ಲಿ ಮೃತಪಟ್ಟಿದೆ.
ಬಿಜಾಪುರದ ಪ್ರಶಾಂತ ಕುಂಬಾರ ಎಂಬಾತನೇ ಲಾರಿ ಚಾಲಕ ಎಂದು ತಿಳಿದು ಬಂದಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಯಲ್ಲಾಲಿಂಗ್ ಕುನ್ನೂರು ತನಿಖೆ ನಡೆಸುತ್ತಿದ್ದಾರೆ.
