MLA Pradeep eshwar: ಚಿಕ್ಕಬಳ್ಳಾಪುರ: ಸರ್ಕಾರದಿಂದ ವಿಧಿಸುವ ಬೀದಿ ಬದಿ ವ್ಯಾಪಾರಿಗಳ ಸುಂಕವನ್ನು ತಾನೇ ಸ್ವತಃ ಭರಿಸುವುದಾಗಿ ಶಾಸಕರೊಬ್ಬರು ಮುಂದೆ ಬಂದಿದ್ದಾರೆ. ” ಬೀದಿ ಬದಿ ವ್ಯಾಪಾರಿಗಳ ಸುಂಕವನ್ನು ನಾನು ಭರಿಸುವೆ. ಅವರ ಹಿತವನ್ನು ಸಹ ಕಾಯಲಾಗುವುದು ” ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್(MLA Pradeep eshwar) ತಿಳಿಸಿದ್ದಾರೆ.
‘ನಮಸ್ತೆ ಚಿಕ್ಕಬಳ್ಳಾಪುರ ‘ ಕಾರ್ಯಕ್ರಮದ ಭಾಗವಾಗಿ ಗುರುವಾರ ನಗರದ ಎಪಿಎಂಸಿ, ತರಕಾರಿ ಮಾರುಕಟ್ಟೆ ಮತ್ತಿತರ ಕಡೆಗಳಲ್ಲಿನ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿದರು. ಆಗ ಬೀದಿ ಬದಿ ವ್ಯಾಪಾರಿಗಳು ತಮಗೆ ಎದುರಾಗುತ್ತಿರುವ ಕಷ್ಟಗಳ ಬಗ್ಗೆ ವಿವರಿಸಿದರು. ನಂತ್ರ ಅವರು ಈ ಘೋಷಣೆ ಮಾಡಿದರು.
ಈ ಹಿಂದಿನ ಶಾಸಕ, ಸುಧಾಕರ್ ಅವರೂ ಬೀದಿ ಬದಿ ವ್ಯಾಪಾರಿಗಳ ಸುಂಕ ಕಟ್ಟುತ್ತಿದ್ದರಂತೆ. ಇದು ತುಂಬಾ ಒಳ್ಳೆಯ ಕೆಲಸ. ಆ ಕೆಲಸವನ್ನು ನಾನೂ ಮುಂದುವರಿಸುವೆ, ಇಲ್ಲಿ ಸಾವಿರಾರು ಕುಟುಂಬಗಳು ಬೀದಿಬದಿ ವ್ಯಾಪಾರ ನಡೆಸಿ ತಮ್ಮ ಬದುಕು ಸಾಗಿಸುತ್ತಿವೆ ಎಂದು ಅವರು ಹೇಳಿದರು.
ಇಲ್ಲಿನ ಎಂ.ಜಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ವಿಸ್ತರಣೆ ಮಾಡಲಿದ್ದಾರೆ. ರಸ್ತೆಯ ಮಧ್ಯದಿಂದ ಎರಡೂ ಬದಿ ತಲಾ 50 ಅಡಿ ತೆರವುಗೊಳಿಸಲು ಉದ್ದೇಶಿಸಲಾಗಿದೆ. ಇದರಿಂದ ತೊಂದರೆಗೆ ಸಿಲುಕುವ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯವಾಗಿ ವ್ಯಾಪಾರ ವಹಿವಾಟಿಗೆ ಮತ್ತೊಂದು ಕಡೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ನಾಗರಿಕರು ಸಹ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ವ್ಯಾಪಾರಿಗಳು ಮತ್ತು ಜನರ ಕಷ್ಟಗಳನ್ನು ಆಲಿಸಿದ ಶಾಸಕರು ನಂತರ ಬೀದಿ ಬದಿಯ ಹೋಟೆಲ್ನಲ್ಲಿಯೇ ಬೆಳಗಿನ ಉಪಾಹಾರ ಸೇವಿಸಿದರು.
ಇದನ್ನೂ ಓದಿ: ನಾಳೆ ರಾಜ್ಯಾದ್ಯಂತ “ಶಕ್ತಿ ಯೋಜನೆ”ಗೆ ಚಾಲನೆ : ಮಹಿಳೆಯರ ಉಚಿತ ಬಸ್ ರೂಲ್ಸ್ ಹೀಗಿದೆ
