Indira Canteen: ರಾತ್ರಿ ಬೆಳಗಾಗುವಷ್ಟರಲ್ಲಿ ಹುಬ್ಬಳ್ಳಿಯ ಮಂಟೂರು ರಸ್ತೆಯ ಸತ್ಯಹರಿಶ್ಚಂದ್ರ ಕಾಲೋನಿಯಲ್ಲಿ (Satya Harishchandra) ಸ್ಮಶಾನದ ಕಾಂಪೌಂಡ್ ಒಡೆದು ಇಂದಿರಾ ಕ್ಯಾಂಟೀನ್ (Indira Canteen) ನಿರ್ಮಾಣ ಮಾಡುತ್ತಿದ್ದು, ಸರ್ಕಾರದ ನಡೆಗೆ ಸ್ಥಳೀಯರಿಂದ ಮತ್ತು ಹಿಂದೂ ಪರ ಸಂಘಟನೆಯಿಂದ ಆಕ್ರೋಶ ವ್ಯಕ್ತವಾಗಿದೆ.
ಹೌದು, ಹುಬ್ಬಳ್ಳಿ ಮಂಟೂರು ರಸ್ತೆಯಲ್ಲಿ ಸತ್ಯಹರಿಶ್ಚಂದ್ರ ಕಾಲೋನಿಯ ಪಕ್ಕದಲ್ಲಿ ಸರ್ವೆ ನಂಬರ್ 212ರಲ್ಲಿ ಸುಮಾರು ಏಂಟು ಎಕರೆಯಲ್ಲಿ ಹಿಂದೂಗಳ ರುದ್ರಭೂಮಿಯಿದೆ. ಇದೀಗ ಈ ಸ್ಮಶಾನದ ಕಾಂಪೌಂಡ್ ಗೋಡೆ ಒಡೆದು ರಾತ್ರೋರಾತ್ರಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದೆ.
ಇಂದಿರಾ ಕ್ಯಾಂಟೀನ್ ಬಡವರ, ಶ್ರಮಿಕರ, ಕಾರ್ಮಿಕರ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಆರಂಭಿಸಿರುವ ಯೋಜನೆಯಾಗಿದೆ. ಆದ್ರೆ ಯೋಜನೆ ಆರಂಭದಿಂದಲೂ ವಿವಾದಕ್ಕೆ ಕಾರಣವಾಗಿದೆ.
ಒಂದು ಕಡೆ ಇಂದಿರಾ ಕ್ಯಾಂಟೀನ್ ಕಾಮಗಾರಿ, ಇನ್ನೊಂದು ಕಡೆ ಹಿಂದೂಪರ ಸಂಘಗಳ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿಷಯ ತಿಳಿದು, ಕಾಮಗಾರಿ ಸ್ಥಳಕ್ಕೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Mutalik) ಭೇಟಿ ನೀಡಿ ಮಾತನಾಡಿ, ಅಬ್ಬಯ್ಯ ಅವರು ದಲಿತರ ವೋಟ್ ಮೇಲೆ ಗೆದ್ದಿದ್ದಾರೆ. ಆದರೆ ಈಗ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇವತ್ತು ಇಂದಿರಾ ಕ್ಯಾಂಟೀನ್, ನಾಳೆ ಅಬ್ಬಯ್ಯ ಕ್ಯಾಂಟೀನ್ ಕಟ್ಟುತ್ತಾರೆ. ಹಿಂದೂ ರುದ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಬೇಡ. ಕೂಡಲೇ ಇಂದಿರಾ ಕ್ಯಾಂಟೀನ್ ತೆರವು ಮಾಡಿ, ಕಟ್ಟಡ ಸ್ಥಳಾಂತರ ಮಾಡಿ. ಇಲ್ಲದಿದ್ದರೆ ಉಗ್ರ ಹೋರಾಟ ಮೂಲಕ ನಾವೇ ತೆರವು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
