Darshan Thoogudeep: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ (Darshan Thoogudeep) ಅವ್ರು ಬೇಗನೆ ಬಿಡುಗಡೆ ಆಗಲಿ ಎಂದು ಅಭಿಮಾನಿಗಳು ದೇವಸ್ಥಾನದಲ್ಲಿ ಅವರ ಫೋಟೋ ಇಟ್ಟು ಪ್ರಾರ್ಥನೆ ಮಾಡುತ್ತಿದ್ದಾರೆ. ಜೊತೆಗೆ, ವಿವಿಧ ದೇವರಿಗೆ ಹರಕೆ ಹೊರುವುದು, ಪೂಜೆ ಮಾಡಿಸುವುದು ಕೂಡ ಮಾಡುತ್ತಿದ್ದಾರೆ.
ಇದೀಗ ಕೆಲವು ದರ್ಶನ್ ಅಭಿಮಾನಿಗಳು ದೇವಸ್ಥಾನದಲ್ಲಿ ದೇವರ ವಿಗ್ರಹದ ಮುಂದೆಯೇ ದರ್ಶನ್ ಅವರ ಭಾವಚಿತ್ರಗಳನ್ನು ಇಟ್ಟು ಪೂಜೆ ಮಾಡಿದ್ದು, ಕೆಲವು ಸಂಪ್ರದಾಯವಾದಿಗಳನ್ನು ಕೆರಳಿಸಿದೆ. ಇದು ಸಂಪ್ರದಾಯಕ್ಕೆ ವಿರುದ್ಧ ದರ್ಶನ್ ಕೊಲೆ ಆರೋಪಿ ಆತನ ಭಾವಚಿತ್ರಗಳನ್ನು ಹೀಗೆ ದೇವಸ್ಥಾನದಲ್ಲಿ ಇಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈಗಾಗಲೇ ಬಳ್ಳಾರಿಯ ಕುರಗೋಡುವಿನಲ್ಲಿರುವ ಬಸವೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಅಭಿಮಾನಿಗಳು ನಟ ದರ್ಶನ್ ತೂಗುದೀಪ ಅವರ ಭಾವಚಿತ್ರವನ್ನು ಇಡಿಸಿ ಪೂಜೆ ಮಾಡಿಸಿದ್ದಾರೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ, ಮುಜರಾಯಿ ಇಲಾಖೆ ಪೂಜೆ ಮಾಡಿದ್ದ ಅರ್ಚಕರನ್ನು ತೆಗೆದುಹಾಕಿದೆ. ಇದು ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನವಾಗಿದ್ದು, ದರ್ಶನ್ ಫೋಟೊ ಇಟ್ಟಿದ್ದು ನಿಯಮದ ಉಲ್ಲಂಘನೆಯಾಗಿದ್ದು, ಭಕ್ತರ ಮನಸ್ಸಿಗೆ ಘಾಸಿಯಾಗಿದೆ ಎಂದು ಕಾರಣ ಕೊಟ್ಟು ಕೆಲಸದಿಂದ ತೆಗೆಯಲಾಗಿದೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಕೆಲವರು ದರ್ಶನ್ ಕೊಲೆಗಡುಕ, ಆತನ ಮೇಲಿನ ಆರೋಪಗಳು ಹಾಗೇ ಇವೆ. ಆತ ನಿರಪರಾಧಿ ಎಂದು ಸಾಬೀತಾಗಿಲ್ಲ. ಆತನ ಫೋಟೊವನ್ನು ಈ ರೀತಿ ದೇವರ ಮುಂದೆ ಇಡುವುದು ಹುಚ್ಚಾಟ, ಇದರಿಂದ ದೇವರ ಭಕ್ತರಿಗೆ ಬೇಸರವಾಗುತ್ತದೆ ಎಂದಿದ್ದಾರೆ.
ಇನ್ನು ದರ್ಶನ್ ಕೊಲೆ ಆರೋಪದ ಮೇಲೆ ಜೈಲಿನಲ್ಲಿದ್ದಾರೆ. ಅಂತಹ ವ್ಯಕ್ತಿಯ ಫೋಟೊಗಳನ್ನು ದೇವರ ವಿಗ್ರಹದ ಮುಂದೆ ಯಾಕೆ ಇಡಬೇಕು. ಅಭಿಮಾನಿಗಳು ಮನೆಯಲ್ಲಿ ಬೇಕಾದರೆ ದರ್ಶನ್ಗೆ ಪೂಜೆ ಮಾಡಿಕೊಳ್ಳಲಿ ಆದರೆ ದೇವಸ್ಥಾನಗಳಲ್ಲಿ ಈ ರೀತಿ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
