Live in Relationship: ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದ ಸಂದರ್ಭದಲ್ಲಿ ಕೊಟ್ಟಿದ್ದ ಹಣ ಹಾಗೂ ಆಭರಣಗಳನ್ನು ವಾಪಾಸು ಕೊಡು ಎಂದು ಒತ್ತಾಯಿಸಿದ ಯುವಕನಿಗೆ ಆತನ ಮಾಜಿ ಪ್ರೇಯಸಿ ಹಾಗೂ ಆಕೆಯ ಸಹಚರರು ಥಳಿಸಿ ವಿಷ ಕುಡಿಯುವಂತೆ ಒತ್ತಾಯ ಮಾಡಿದ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿದೆ.
ಶೈಲೇಂದ್ರ ಗುಪ್ತಾ ಹಲ್ಲೆಗೊಳಗಾದವ. ಈತ ಹಮೀರ್ಪುರದ ನಿವಾಸಿ. ಮಹೋಬಾದ ಖಾಸಗಿ ಕಂಪನಿಯಲ್ಲಿ ಈತನ ಕೆಲಸ. ನಾಲ್ಕು ವರ್ಷದ ಹಿಂದೆ ಕಾಲಿಪಹರಿ ಗ್ರಾಮದ ಮಹಿಳೆ ಜೊತೆ ಈತ ಲಿವ್ ಇನ್ ಸಂಬಂಧದಲ್ಲಿದ್ದ. ಆ ಮಹಿಳೆಗೆ ಲಕ್ಷಾಂತರ ರೂ. ಮೌಲ್ಯದ ದುಬಾರಿ ಆಭರಣಗಳನ್ನು ಕೊಡಿಸಿದ್ದ. ಅಲ್ಲದೇ ನಾಲ್ಕು ಲಕ್ಷ ರೂ. ನಗದು ನೀಡಿದ್ದ. ಆದರೆ ಮಹಿಳೆ ಇತ್ತೀಚೆಗೆ ಬೇರೋರ್ವರ ಜೊತೆ ಸಂಪರ್ಕವಿಟ್ಟುಕೊಂಡಿದ್ದಳು. ಇದರಿಂದ ಶೈಲೇಂದ್ರ ಹಾಗೂ ಮಹಿಳೆ ದೂರವಾಗಿದ್ದರು.
ಹಾಗಾಗಿ ಶೈಲೇಂದ್ರ ತಾನು ನೀಡಿದ ಹಣ, ಆಭರಣ ಹಿಂದಿರುಗಿಸುವಂತೆ ಮಹಿಳೆಯ ಬಳಿ ಕೇಳಿದ್ದ. ಆಕೆಯ ಮನೆಗೆ ಹೋದಾಗ ಮಹಿಳೆ, ಆಕೆಯ ಸಹಚರರಾದ ಸದಾಬ್ ಬೇಗ್, ದೀಪಕ್, ಹ್ಯಾಪಿ ಎಂಬುವವರ ಜೊತೆ ಸೇರಿ ಹಲ್ಲೆ ಮಾಡಿದ್ದು, ನಂತರ ಆತನಿಗೆ ವಿಷ ಕುಡಿಯುವಂತೆ ಒತ್ತಾಯ ಮಾಡಿದ್ದಾರೆ.
ದಾಳಿಯ ಬಳಿಕ ಯುವಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
