Gangavati: 17 ವರ್ಷದ ಬಾಲಕನೊಬ್ಬ ಆಟೊ ಚಲಾಯಿಸುವಾಗ ಅಪಘಾತ ಮಾಡಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದ ಪ್ರಕರಣದಲ್ಲಿ ಆಟೊ ಮಾಲೀಕನಿಗೆ 1,41,61,580 ರೂ. ದಂಡವನ್ನು ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯ ವಿಧಿಸಿದೆ.
ಯಲಬುರ್ಗಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಗಂಗಾವತಿ ನಿವಾಸಿ ರಾಜಶೇಖರ ಪಾಟೀಲ್, 2021ರ ಮಾರ್ಚ್ 10ರಂದು ಪಟ್ಟಣದ ಸ್ವಸ್ತಿಕ್ ಕಂಪ್ಯೂಟರ್ ಬಳಿ ಬೈಕ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತಿದ್ದರು. ಈ ವೇಳೆ ಬಾಲಕನೊಬ್ಬ ಅಡ್ಡಾದಿಡ್ಡಿಯಾಗಿ ಆಟೊ ಓಡಿಸಿಕೊಂಡು ಬಂದು ಅವರಿಗೆ ಡಿಕ್ಕಿ ಹೊಡೆದಿದ್ದ.
ತೀವ್ರ ಗಾಯಗೊಂಡಿದ್ದ ರಾಜಶೇಖರ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು. ಸೂಕ್ತ ಪರಿಹಾರ ನೀಡುವಂತೆ ಕೋರಿ ರಾಜಶೇಖರ ಪಾಟೀಲ್ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾ. ರಮೇಶ ಎಸ್.ಗಾಣಿಗೇರ ಅವರು, ಬಾಲಕನಿಗೆ ಆಟೊ ಚಲಾಯಿಸಲು ಕೊಟ್ಟಿದ್ದ ಮಾಲೀಕನಿಗೆ ದೊಡ್ಡ ಮೊತ್ತದ ದಂಡ ವಿಧಿಸಿದ್ದಾರೆ. ದಂಡದ ಮೊತ್ತವನ್ನು ರಾಜಶೇಖರ ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆಯೂ ಸೂಚಿಸಿದ್ದಾರೆ.
