Home » ಹುಬ್ಬಳ್ಳಿ : ಡಾ. ಬದರೀನಾಥ ಜಹಗೀರದಾರಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಹುಬ್ಬಳ್ಳಿ : ಡಾ. ಬದರೀನಾಥ ಜಹಗೀರದಾರಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

by Praveen Chennavara
0 comments

ವಿಶ್ವ ಕನ್ನಡ ಬಳಗ(ರಿ ) ಹುಬ್ಬಳ್ಳಿ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿಯ ಅಕ್ಕನ ಬಳಗದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಸಂಘಟನಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಯುವ ಸಾಹಿತಿ ಡಾ. ಬದರೀನಾಥ ಜಹಗೀರದಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ನೀಲಕಂಠ ಜಡಿ ಮಾತನಾಡಿ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ವಿಶ್ವ ಕನ್ನಡ ಬಳಗ ಆಯೋಜಿಸಿರುವ ಈ ಕಾರ್ಯಕ್ರಮ ಶ್ಲಾಘನೀಯ. ಇದರ ಮೂಲಕ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಿದೆ. ಇಂದಿನ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ಆಯೋಜನೆ ಮಾಡಲಾಗಿದೆ. ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೋಟ್ಲಪ್ಪ ಪಟ್ಟಾರ ಅವರು ಮಾತನಾಡಿ ನಮ್ಮ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ವಿಶಿಷ್ಟತೆಯಿಂದ ಕೂಡಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆಯೆಂದರೆ ಅದು ನಾವೆಲ್ಲ ಹೆಮ್ಮೆ ಪಡುವ ಸಂಗತಿ. ವಿವಿಧ ಭಾಷಾ ಗೊಂದಲಗಳ ನಡುವೆಯೂ ಕನ್ನಡ ಭಾಷೆ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡು ಮುನ್ನಡೆದಿದೆ. ತಾಯಿ ಭುವನೇಶ್ವರಿಯ ಆಶೀರ್ವಾದ ಸದಾ ಎಲ್ಲರ ಮೇಲಿರಲಿ, ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ಸಾಗುತಿರಲಿ ಎಂದು ಹಾರೈಸಿದರು.

ಅತಿಥಿಗಳಾಗಿ ಸುರಗಯ್ಯ ಸ್ವಾಮಿ, ಶಿವಾನಂದ ಮಠಪತಿ, ಗುರುರಾಜ ಹೂಗಾರ, ಹೇಮಂತ್ ಕುಮಾರ ಮೋದಿ, ರಮೇಶ್ ಮಹಾದೇವಪ್ಪನವರ, ಬಸವರಾಜ ಮುಳಗುಂದ, ಕಾರ್ತಿಕ್ ಶೆಟ್ಟಿ, ಮೀನಾಕ್ಷಿ ವಂಟಮುರಿ, ಶಾಂತಾ ಹೊಸಕೋಟೆ, ಗಿರಿಜಾ ಹಿರೇಮಠ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ವಿಶ್ವಕನ್ನಡ ಬಳಗದ ಅಧ್ಯಕ್ಷರಾದ ಸದಾಶಿವ ಎಸ್ ಚೌಶೆಟ್ಟಿ ಮತ್ತು ಬಳಗದ ಪದಾಧಿಕಾರಿಗಳು, ಕಲಾವಿದರು, ಸಾಹಿತಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

You may also like

Leave a Comment