Home » IAS ಆಫೀಸರ್ ನಿಂದ ಐಐಟಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ | ಸರಕಾರ ತಗೊಂಡ ತೀರ್ಮಾನವೇನು?

IAS ಆಫೀಸರ್ ನಿಂದ ಐಐಟಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ | ಸರಕಾರ ತಗೊಂಡ ತೀರ್ಮಾನವೇನು?

0 comments

ಐಐಟಿ ವಿದ್ಯಾರ್ಥಿಗಳಿಗೆ ಐಎಎಸ್ ಆಫೀಸರ್ ಓರ್ವ ಲೈಂಗಿಕ ಕಿರುಕುಳ ನೀಡಿದ ಅಮಾನವೀಯ ಘಟನೆಯೊಂದು ನಡೆದಿದೆ. ಉನ್ನತ ಹುದ್ದೆಯ ಸ್ಥಾನ ಅಲಂಕರಿಸಿಕೊಂಡಿದ್ದ ವ್ಯಕ್ತಿಯೇ ಈ ರೀತಿ ಮಾಡಿರುವುದು ಖೇದಕರ ಎಂದೇ ಹೇಳಬಹುದು.

ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದ ಐಎಎಸ್ ಅಧಿಕಾರಿ ಸಯ್ಯದ್ ರಿಯಾಜ್ ಅಹ್ಮದ್‌ನ್ನು ಜಾರ್ಖಂಡ್ ಸರಕಾರ ಶುಕ್ರವಾರ ಅಮಾನತು ಮಾಡಿದೆ.

ಗುರುವಾರ ಐಎಎಸ್ ಆಫೀಸರನ್ನು ಬಂಧಿಸಲಾಗಿದ್ದು, ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಖುಂಟಿ ಎಂ ಸಬ್ ಡಿವಿಷನಲ್ ಮೆಜಿಸ್ಟ್ರೇಟ್ ಆಗಿ ಅಹ್ಮದ್ ಅವರು ಕಾರ್ಯನಿರ್ವಹಿಸುತ್ತಿದ್ದರು.

ಎಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳು ಪೊಲೀಸರಿಗೆ ದೂರು ನೀಡಿದ್ದರ ಪರಿಣಾಮ ಈ ಕ್ರಮ ಜರುಗಿಸಲಾಗಿದೆ. ಖುಂಟಿ ಎಸ್‌ಡಿಎಂ ಆಗಿರುವ ಸಯ್ಯದ್ ರಿಯಾಜ್ ಅಹ್ಮದ್ ನನ್ನು ಅಮಾನತು ಮಾಡಲು ಮುಖ್ಯಮಂತ್ರಿ ಹೇಮಂತ್ ಸೊರೇನ್ ಆದೇಶ ಮಾಡಿದ್ದಾರೆ. ಎಸ್‌ಡಿಎಂ ಅಹ್ಮದ್ ವಿರುದ್ಧ ಲೈಂಗಿಕ ಕಿರುಕುಳ ಆರೋಪವಿದೆ ಎಂದು ಮುಖ್ಯಮಂತ್ರಿಯವರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಹ್ಮದ್ ವಿರುದ್ಧ ಐಪಿಸಿ ಸೆಕ್ಷನ್ 354( ಕಿರುಕುಳ ಅಥವಾ ಮಹಿಳೆಯ ಮೇಲೆ ಬಲವಂತ), 354ಎ(ಲೈಂಗಿಕ ದೌರ್ಜನ್ಯ) ಮತ್ತು 509 (ಮಹಿಳೆಯ ನಮ್ರತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತನೆ ಅಥವಾ ನುಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಜುಲೈ 5ರಂದು ನ್ಯಾಯಾಲಯ ಅಹ್ಮದ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು. ಸಂತ್ರಸ್ತೆ ಸೇರಿದಂತೆ ಎಂಟು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಖುಂಟಿಯಲ್ಲಿ ತರಬೇತಿ ಪಡೆಯಲು ಹೊರ ರಾಜ್ಯದಿಂದ ಬಂದ ವಿದ್ಯಾರ್ಥಿಗಳು. ಶನಿವಾರ ಡೆಪ್ಯುಟಿ ಡೆವಲಪ್‌ಮೆಂಟ್ ಕಮಿಷನರ್ ಮನೆಯಲ್ಲಿ ನಡೆದ ರಾತ್ರಿ ಭೋಜನದಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಪಾರ್ಟಿಯಲ್ಲಿ ಒಬ್ಬಂಟಿಯಾಗಿದ್ದಾಗ ವಿದ್ಯಾರ್ಥಿನಿ ಮೇಲೆ ಎಸ್‌ಡಿಎಂ ಅಹ್ಮದ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.

You may also like

Leave a Comment