ಬೆಂಗಳೂರು: ರಾಜ್ಯದ ಸರ್ಕಾರಿ ಉದ್ಯೋಗಿಯೊಬ್ಬ 48 ಗಂಟೆಗೂ ಹೆಚ್ಚು ಕಾಲ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಕಾಯ್ದೆಯ ಅಡಿ ಬಂಧನದಲ್ಲಿದ್ದರೆ, ಆ ನಂತರ ಜಾಮೀನಿನ ಮೇಲೆ ಬಿಡುಗಡೆಯಾದರೆ ಕೂಡಾ ಆತ ಸೇವೆಯಿಂದ ತಂತಾನೇ ಅಮಾನತುಗೊಂಡಿರುತ್ತಾನೆ. ಈ ಹಿನ್ನಲೆಯಲ್ಲಿ ಸಕ್ಷಮ ಪ್ರಾಧಿಕಾರ ಅಮಾನತು ರದ್ದುಗೊಳಿಸಿ ಮುಂದಿನ ಔಪಚಾರಿಕ ಆದೇಶ ಹೊರಡಿಸುವ ತನಕ ಆತನ ಅಮಾನತು ಮುಂದುವರೆಯುತ್ತದೆ ಎಂಬುದಾಗಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಆಡಳಿತ ನ್ಯಾಯಾಧಿಕರಣ ನೀಡಿದ್ದ ಆದೇಶವನ್ನು ರದ್ದು ಮಾಡುವಂತೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮ ಪಂಚಾಯ್ತಿ ಪಿಡಿಓ ಡಿ.ಎಂ ಪದ್ಮನಾಭ ಎಂಬುವರು ಹೈಕೋರ್ಟ್ ಗೆ ಅರ್ಜಿಯಲ್ಲಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಮತ್ತು ಸಿಎಂ ಜೋಶಿ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.
ಸರ್ಕಾರಿ ನೌಕರ ಬಂಧನಕ್ಕೆ ಒಳಗಾದ ಬಳಿಕ, ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗೆ ಬಂದ ಮೇಲೆ ನೇರ ಕಚೇರಿಗೆ ಹೋಗಬಹುದೇ ಇಲ್ಲವೇ ಎಂಬುದನ್ನು 2015ರ ಸರ್ಕಾರಿ ಸುತ್ತೋಲೆಯ ಪ್ರಕಾರ ಸಕ್ಷಮ ಪ್ರಾಧಿಕಾರ ನಿರ್ಧರಿಸುತ್ತದೆ. ಈ ಸರ್ಕಾರಿ ಅಧಿಕಾರಿಯ ಅಮಾನತು ಆದೇಶವನ್ನು ರದ್ದುಪಡಿಸಬೇಕೋ, ಬೇಡವೋ ಎಂಬ ಬಗ್ಗೆ ಕೂಡಾ ಪ್ರಾಧಿಕಾರದ ನಿರ್ಣಯವೇ ಅಂತಿಮ ಎಂದು ಕೋರ್ಟು ಹೇಳಿತು.
ಇನ್ನೂ ಕರ್ನಾಟಕ ನಾಗರೀಕ ನಿಯಮಗಳು 1957ರ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 10 (2) (ಎ) ನಿಯಮಗಳ ಪ್ರಕಾರ ಸರ್ಕಾರಿ ನೌಕರ 48 ಗಂಟೆಗಳಿಗೂ ಹೆಚ್ಚುಕಾಲ ಬಂಧನದಲ್ಲಿದ್ದರೇ ಸೇವೆಯಿಂದ ತಂತಾನೆ ಅಮಾನತುಗೊಳ್ಳುತ್ತಾನೆ ಎಂಬುದಾಗಿ ತಿಳಿಸಿದೆ.
