ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿಯೋರ್ವರು ತಮ್ಮ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರದಲ್ಲಿ ನಿನ್ನೆ ನಡೆದಿದೆ.
ಸುದೀರ್ಘ ಕಾಲ ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರಾಗಿದ್ದ ಬೆಳ್ಳಾರು ಪಟೇಲರ ಮನೆ ಡಾ. ಎಂ ಪಿ ರಾಘವೇಂದ್ರ ರಾವ್ (76) ಮೃತಪಟ್ಟ ವ್ಯಕ್ತಿ.
ರಾಘವೇಂದ್ರ ರಾವ್ ಅವರ ಪತ್ನಿ ಗೀತಾ ರಾವ್ ಒಂದು ತಿಂಗಳ ಹಿಂದೆ ನಿಧನ ಹೊಂದಿದ್ದು, ಅನಂತರ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ನಂತರ ಅವರು ಮೊಕ್ತಸರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಉಳ್ಳೂರು ಸೇರಿದಂತೆ ಕುಕ್ಕೆಹಳ್ಳಿ, ಕೊಳಲಗಿರಿಯಲ್ಲಿ ಹಾಗೂ ಪೆರ್ಡೂರು, ಮಲ್ಪೆ, ಕೆಮ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾಘವೇಂದ್ರ ರಾವ್ ಅವರು ಸೇವೆ ಸಲ್ಲಿಸಿದ್ದರು. ನಂತರ ಅವರು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಾಗಿ, ಜಿಲ್ಲಾ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಕೊಳಲಗಿರಿಯಲ್ಲಿ ವೈದ್ಯಕೀಯ ಸೇವೆಯನ್ನು ಮುಂದುವರಿಸಿದ್ದರು.
ಇವರು ಹತ್ತಾರು ದೇವಸ್ಥಾನಗಳ ಜೀರ್ಣೋದ್ಧಾರ
ಕಾರ್ಯದ ಮಾರ್ಗದರ್ಶಕರಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳ ನೇತಾರರಾಗಿದ್ದರು. ಮೃತರು ವೈದ್ಯರಾದ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
