Kakinada Accident: ಆಂಧ್ರಪ್ರದೇಶ: ಚಾಲಕನ ನಿಯಂತ್ರಣ ತಪ್ಪಿ ಜಲ್ಲಿ ತುಂಬಿದ್ದ ಲಾರಿ ದೇವಸ್ಥಾನಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ (Kakinada Accident) ನಡೆದಿದೆ. ಘಟನೆ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಚಾಲಕ ಧೋತಿ ಶೇಖರ್ (28), ಕ್ಲೀನರ್ ಕೋಣೂರು ನಾಗೇಂದ್ರ (23) ಹಾಗೂ ದೇವಸ್ಥಾನದಲ್ಲಿ ಮಲಗಿದ್ದ ಸೋಮು ಲಕ್ಷ್ಮಣ ರಾವ್ (48) ಎಂದು ಗುರುತಿಸಲಾಗಿದೆ. ಮೃತ ಚಾಲಕ ಹಾಗೂ ಕ್ಲೀನರ್ ಪಟ್ಟಿಪಾಡು ಮಂಡಲದ ಗಜ್ಜನಪುಡಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ಅನ್ನಾವರಂ ಕಡೆಯಿಂದ ಒಂಟಿಮಾಮಿಡಿ ಕಡೆಗೆ ಸಾಗುತ್ತಿದ್ದ ಲಾರಿ ಎ.ಕೊತ್ತಪಲ್ಲಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಕುಡಿಯುವ ನೀರಿನ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದ್ದು, ನಂತರ ಅಲ್ಲೇ ಇದ್ದ ಗಣೇಶ ದೇವಸ್ಥಾನಕ್ಕೆ ನುಗ್ಗಿದೆ. ಘಟನೆ ಪರಿಣಾಮ ಲಾರಿ ನಜ್ಜುಗುಜ್ಡಾಗಿದ್ದು, ಚಾಲಕ, ಕ್ಲೀನರ್ ಹಾಗೂ ದೇವಸ್ಥಾನದಲ್ಲಿ ಮಲಗಿದ್ದ ಸೋಮು ಲಕ್ಷ್ಮಣ ಈ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಘಟನಾಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತನಿಖೆ ನಡೆಸುತ್ತಿದ್ದಾರೆ.
