Home » ಮಂಗಳೂರು : ಕೊರಗಜ್ಜ, ಗುಳಿಗ ಕ್ಷೇತ್ರಕ್ಕೆ ಭೇಟಿ ನೀಡಿದ ಕಾಂತಾರ ನಟಿ ಲೀಲಾ!ಭೇಟಿ ನಂತರ ಏನಂದ್ರು?

ಮಂಗಳೂರು : ಕೊರಗಜ್ಜ, ಗುಳಿಗ ಕ್ಷೇತ್ರಕ್ಕೆ ಭೇಟಿ ನೀಡಿದ ಕಾಂತಾರ ನಟಿ ಲೀಲಾ!ಭೇಟಿ ನಂತರ ಏನಂದ್ರು?

by ಕೆ. ಎಸ್. ರೂಪಾ
0 comments

ಕರಾವಳಿಯ ಕಲೆ, ದೈವ ಶಕ್ತಿಯ ಭಕ್ತಿ, ನಂಬಿಕೆಯನ್ನು ಬಿಂಬಿಸುವ ಚಿತ್ರ ಕಾಂತರದ ಮೂಲಕ ದೊಡ್ಡ ಯಶಸ್ಸನ್ನು ಕಂಡ ಚೆಂದುಳ್ಳಿ ಚೆಲುವೆ ಸಪ್ತಮಿ ಗೌಡ ಈ ನಡುವೆ ಮಂಗಳೂರಿನ ದೈವೀ ಕ್ಷೇತ್ರಗಳನ್ನ ಸಂದರ್ಶಿಸಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕರಾವಳಿಯ ದೈವ ಶಕ್ತಿ, ಕಾರ್ಣಿಕ ದ ಮೂಲಕವೇ ಜಾಗತಿಕವಾಗಿ ಭರ್ಜರಿ ಯಶಸ್ವಿಯಾದ ‘ಕಾಂತಾರ’ ಸಿನಿಮಾ ಸದ್ಯ ಭಾರತದ ಸಿನಿಮಾ ಇತಿಹಾಸದ ಮೈಲಿಗಲ್ಲನ್ನು ದಾಟಿ ಪ್ರಖ್ಯಾತಿ ಗಳಿಸಿದೆ. ಈ ಅದ್ಭುತ ಯಶಸ್ಸಿಗೆ ದೈವ ಶಕ್ತಿಯೇ ಕಾರಣ ಎಂಬ ನಂಬಿಕೆಯು ಇದ್ದು, ಈ ಮಧ್ಯೆ ಕಾಂತಾರದ ಗೆಲುವಿನ ನಡುವೆ ನಟಿ ಸಪ್ತಮಿ ಗೌಡ ಮಂಗಳೂರಿನ ದೈವೀ ಕ್ಷೇತ್ರಗಳನ್ನ ಸಂದರ್ಶಿಸಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಂಗಳೂರಿನ ಕಲ್ಲಾಪು ಬಳಿಯ ಬುರ್ದುಗೋಳಿಯ ಗುಳಿಗ ದೈವಸ್ಥಾನ, ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳ ಹಾಗೂ ಈ ಭಾಗದ ಕೆಲವು ದೈವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಸಪ್ತಮಿ ಗೌಡ ರವರ ತಾಯಿ ಶಾಂತ, ನಟ ಶಾನೀಲ್ ಗುರು, ಅಲ್ಲದೆ, ತಮ್ಮ ಕುಟುಂಬದ ಸದಸ್ಯರು, ಸಿನಿಮಾದ ಸಹನಟರು ಹಾಗೂ ಸ್ನೇಹಿತರೊಂದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬುರ್ದುಗೋಳಿ ಆದಿಸ್ಥಳ ಕ್ಷೇತ್ರದ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ನಾಯ್ಕ್ ಅವರು ಸಪ್ತಮಿ ಗೌಡ ಅವರನ್ನು ಆದರದಿಂದ ಸ್ವಾಗತಿಸಿ, ಕ್ಷೇತ್ರದ ಐತಿಹ್ಯವನ್ನ ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ಸಪ್ತಮಿ ಗೌಡ, ವಿಶ್ವದಾದ್ಯಂತ ಕಾಂತಾರ ಸಿನಿಮಾದ ಅಲೆ ಜೋರಾಗಿದ್ದು, ಸಿನಿಮಾ ನಿರ್ಮಾಣದ ವೇಳೆ ಕರಾವಳಿ ಭಾಗದ ಆಚರಣೆ, ಸಂಸ್ಕೃತಿ, ದೈವಾರಾಧನೆ ಬಗ್ಗೆ ತಾನು ತಿಳಿದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

banner

ಇತ್ತೀಚಿಗೆ ನಡೆದ ವೈಯಕ್ತಿಕ ಘಟನೆಯೊಂದು ದೈವಗಳ ಬಗ್ಗೆ ಹುಟ್ಟಿದ ನಂಬಿಕೆ ಗಟ್ಟಿಯಾಗುವಂತೆ ಮಾಡಿದ್ದು, ಈಗಾಗಲೇ ಸಿನಿಮಾಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಬಂದಿದ್ದು, ಸ್ಕ್ರಿಪ್ಟ್ ರೀಡಿಂಗ್ ಕೂಡ ನಡೆಯುತ್ತಿದೆ.. ಜನರ ಪ್ರೀತಿಯಿಂದ ಜಗತ್ತಿನಾದ್ಯಂತ ಕಾಂತಾರ ಹೌಸ್ ಫುಲ್ ಆಗಿ ,50 ದಿವಸ ಪೂರೈಸುತ್ತಿದ್ದು ತುಳುನಾಡಿನ ದೈವಗಳ ಆಶೀರ್ವಾದವೇ ಚಿತ್ರಕ್ಕೆ ಶ್ರೀರಕ್ಷೆ ಎಂದು ನಟಿ ಸಪ್ತಮಿ ಗೌಡ ಹೇಳಿದ್ದಾರೆ.

ಈ ಬಳಿಕ ಕುತ್ತಾರಿನ ಕೊರಗಜ್ಜನ ಆದಿಸ್ಥಳಕ್ಕೂ ತೆರಳಿ ಪ್ರಾರ್ಥನೆ ಸಲ್ಲಿಸಿದ್ದು, ಕೊರಗಜ್ಜನ ಬಗ್ಗೆ ಕೇಳಿ ತಿಳಿದಿದ್ದು, ಸಾನ್ನಿಧ್ಯವನ್ನು ನೋಡುವ ತವಕದಿಂದ ಆಗಮಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ಅಜ್ಜನ ದಯೆಯಿಂದ ಇನ್ನಷ್ಟು ಚಿತ್ರಗಳು ಸಿಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದಿದ್ದಾರೆ.

ಇದರ ಜೊತೆಗೆ ಮೂಡಬಿದಿರೆ ತಾಲೂಕಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕು ಕೂಡ ಭೇಟಿ ನೀಡಿ ಸಪ್ತಮಿ ಗೌಡ ಪೂಜೆ ಸಲ್ಲಿಸಿದ್ದಾರೆ. ತುಳುನಾಡಿನ ದೈವಾರಾದನೆ ಬಗ್ಗೆ ನನಗೆ ಮೊದಲು ತಿಳಿದಿರಲಿಲ್ಲ ಎಂದಿದ್ದು, ಇದರ ಜೊತೆಗೆ ತುಳು ಭಾಷೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದರೆ ಖಂಡಿತ ನಟಿಸುತ್ತೇನೆ ಎಂದು ನಟಿ ಕಟೀಲು ದೇವಸ್ಥಾನದಲ್ಲಿ ನಟಿ‌ ಮಾಹಿತಿ ನೀಡಿದ್ದು, ಅಲ್ಲಿ ನೆರೆದಿದ್ದ ಅಭಿಮಾನಿಗಳೊಂದಿಗು ಕೂಡ ಮಾತನಾಡಿದ್ದಾರೆ.

You may also like

Leave a Comment