Karnataka: ರಾಜ್ಯ (Karnataka) ಸರ್ಕಾರವು ಅಧ್ಯಯನದ ನೆಪದಲ್ಲಿ ಸರ್ಕಾರಿ ಅಧಿಕಾರಿಗಳ ವಿದೇಶ ಪ್ರವಾಸವನ್ನು ಈ ಕೂಡಲೇ ಜಾರಿಗೆ ಬರುವಂತೆ ನಿರ್ಬಂಧಿಸಿ ಆದೇಶಿಸಿದೆ. ಈ ಮೂಲಕ ಅಧ್ಯಯನದ ಹೆಸರಿನಲ್ಲಿ ಅಧಿಕಾರಿಗಳು ಕೈಗೊಳ್ಳುತ್ತಿದ್ದ ವಿದೇಶ ಪ್ರವಾಸಕ್ಕೆ ಬ್ರೇಕ್ ಹಾಕಲಾಗಿದೆ.

ಈ ಕುರಿತಂತೆ ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, 2024ನೇ ಸಾಲಿನ ಆಗಸ್ಟ್ ತಿಂಗಳಿನಿಂದ 2025ರ ಜುಲೈ ತಿಂಗಳವರೆಗೆ ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಅಧಿಕೃತ ವಿದೇಶ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿ, ಕಲಿಕೆ ಹಾಗು ಶಿಫಾರಸ್ಸುಗಳೊಂದಿಗೆ ಸರ್ಕಾರಕ್ಕೆ ಅಧ್ಯಯನ ವರದಿಯನ್ನು ಒಂದು ವಾರದೊಳಗಾಗಿ ಸಲ್ಲಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಂದ ಸೂಚಿತವಾಗಿರುತ್ತದೆ.
ಆದರೆ, ‘ಅಧಿಕೃತ ವಿದೇಶ ಪ್ರವಾಸದ ವರದಿಗಳನ್ನು ಹಲವು ಅಧಿಕಾರಿಗಳು ಸಲ್ಲಿಸದಿರುವುದು ಗಮನಕ್ಕೆ ಬಂದಿದೆ. ಮುಂಬರುವ ದಿನಗಳಲ್ಲಿ ಅಧಿಕೃತ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಪ್ರಸ್ತಾವ ಸಲ್ಲಿಸುವ ಮೊದಲು ಈ ಹಿಂದೆ ಕೈಗೊಂಡಿರುವ ಪ್ರವಾಸಗಳ ಕಲಿಕೆ ಹಾಗೂ ಅನುಷ್ಠಾನ ವರದಿಯನ್ನು ನೀಡಿದ್ದರೆ ಮಾತ್ರ, ಹಾಲಿ ಪ್ರವಾಸದ ಪ್ರಸ್ತಾವಕ್ಕೆ ಅನುಮತಿ ನೀಡುವ ಕುರಿತು ಪರಿಶೀಲಿಸಲಾಗುವುದು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
