Anna Bhagya Scheme: ರಾಜ್ಯದಲ್ಲಿ ಅನ್ನ ಭಾಗ್ಯದ (Anna Bhagya Scheme) ಐದು ಕೆಜಿ ಅಕ್ಕಿಯ ಬದಲು ಹಣ ಕೊಡುವ ಯೋಜನೆ ಕೇವಲ ಮೂರು ತಿಂಗಳು ಮಾತ್ರ ಇರುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.
ಹೌದು, ಚುನಾವಣಾ ವೇಳೆ ಕಾಂಗ್ರೆಸ್(Congress) ಅನ್ನಭಾಗ್ಯ(Annabhagya) ಯೋಜನೆಯಡಿ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಘೋಷಿಸಿತ್ತು. ಆದರೆ ಈಗ ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಗೆ ಹಿನ್ನೆಡೆ ಉಂಟಾಗಿದ್ದು, ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಕೊಡುವುದರೊಂದಿಗೆ ಉಳಿದ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡುವುದಾಗಿ ಘೋಷಿಸಿದೆ. ಆದರೆ ಈ ಹಣ ಕೇವಲ ಮೂರು ತಿಂಗಳು ಮಾತ್ರ ಜನರಿಗೆ ಸಿಗಲಿದೆ.
ಯಾಕೆಂದರೆ 3 ತಿಂಗಳ ಬಳಿಕ ಸರ್ಕಾರವು ಹೇಗಾದರೂ ಮಾಡಿ ಅಕ್ಕಿಯನ್ನು ಹೊಂದಿಸುತ್ತದೆ. ಆ ಬಳಿಕ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಕೊಡಲಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು ಬಿಪಿಎಲ್ (BPL) ಕುಟುಂಬಗಳಿಗೆ 5 ಕೆಜಿ ಅಕ್ಕಿ ಬದಲು ಮೂರು ತಿಂಗಳು ಹಣ ನೀಡಲಾಗುವುದು. ಅಷ್ಟರಲ್ಲಿ ಅಕ್ಕಿ ಹೊಂದಿಸಿಕೊಂಡು ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಗುರುವಾರ ತುಮಕೂರಿನ ಕೊರಟಗೆರೆಯಲ್ಲಿ (Koratagere) ನಡೆದ ಬಕ್ರಿದ್ ಆಚರಣೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ಕೊಡದಿದ್ದರೆ ಹಣ ನೀಡಬೇಕು ಎಂದು ಬಿಜೆಪಿಯವರೇ (BJP) ಒತ್ತಾಯಿಸಿದ್ದರು. ಆದರೆ ಈಗ ಹಣ ಕೊಟ್ಟರೆ ಅದಕ್ಕೂ ವಿರೋಧ ಮಾಡುತ್ತಿದ್ದಾರೆ. ಏನು ಮಾಡಿದರೂ ವಿರೋಧವನ್ನೇ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಅಲ್ಲದೆ ಐದು ಕೆಜಿ ಅಕ್ಕಿಯ ಬದಲಿಗೆ ಹಣ ಕೊಡುವ ಈ ಯೋಜನೆ ದೀರ್ಘ ಕಾಲ ಇರುವುದಿಲ್ಲ. ಮೂರು ತಿಂಗಳ ಕಾಲ ದುಡ್ಡು ಕೊಡುತ್ತೇವೆ, ಅಷ್ಟರಲ್ಲಿ ಅಕ್ಕಿ ಹೊಂದಿಸುತ್ತೇವೆ ಎಂದು ಹೇಳಿದರು.
ಇದನ್ನು ಓದಿ: Phone Pay: ಲೋಗೋ ಬಳಸಿದರೆ ಕಾನೂನು ಕ್ರಮ ; ಫೋನ್ ಪೇ 50 % ಕಾಂಗ್ರೆಸ್ ಆಂದೋಲನಕ್ಕೆ ಹಿನ್ನಡೆ !
