Jaipur: ಮದುವೆಯಾಗಿ ಬರಿ ಏಳು ದಿನಗಳಷ್ಟೇ ಆಗಿತ್ತು. ಮದುವೆಯಾದ ದಿನದಿಂದಲೂ ಮಂಕಾಗಿದ್ದ ಹೆಂಡತಿಯನ್ನು ಕಂಡ ಗಂಡನು ಆಕೆಯನ್ನು ಖುಷಿ ಪಡಿಸಲೆಂದು ಸಿನಿಮಾವನ್ನು ತೋರಿಸಲು ಕರೆದುಕೊಂಡು ಹೋಗಿದ್ದ ಆದರೆ ಈ ನಿರ್ಧಾರವೇ ಅವನ ಜೀವನಕ್ಕೆ ಮುಳುವಾಗಿದೆ. ಇಂಟರ್ವಲ್ ವೇಳೆ ಪಾಪ್ಕಾರ್ನ್ ತರಲು ಹೋದ ಗಂಡ ವಾಪಸ್ ಬರುವ ವೇಳೆಗೆ ಪತ್ನಿಯು ಎಸ್ಕೇಪ್ ಆಗಿದ್ದಾಳೆ.
ಹೌದು, ಈ ಘಟನೆಯು ಜೈಪುರದಲ್ಲಿ(Jaipur) ನಡೆದಿದ್ದು, ಜೈಪುರದ ಆದರ್ಶನ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ದೂರು ದಾಖಲಾಗಿದೆ. ದೂರು ದಾಖಲಿಸಿರುವ ವ್ಯಕ್ತಿಯನ್ನು ಸಿಕಾರ್ ಜಿಲ್ಲೆಯ ರಿಂಗಾಸ್ ಪ್ರದೇಶ ಕನಾರಾಮ್ ಎಂದು ಗುರುತಿಸಲಾಗಿದೆ. ಹಾಗೂ ಎಸ್ಕೇಪ್ ಆದ ಪತ್ನಿಯ ಹೆಸರು ರೇಖಾ.
ಮದುವೆಯಾಗಿ ಕೇವಲ ಒಂದು ವಾರವಾಗಿತ್ತಷ್ಟೇ ಪತ್ನಿಯು ಮದುವೆಯಾದಾಗಿನಿಂದಲೂ ಬೇಸರದಲ್ಲಿದ್ದಳು. ಇದನ್ನು ಗಮನಿಸಿದ ಪತಿಯು ಖುಷಿ ಪಡಿಸಲೆಂದು ಹಾಗೂ ಶಾಪಿಂಗ್ ನೆಪ ಹೇಳಿ ಹೆಂಡತಿಯೊಂದಿಗೆ ಔಟಿಂಗ್ ಗಾಗಿ ಜೈಪುರಕ್ಕೆ ಹೋಗಿದ್ದನು. ಶಾಪಿಂಗ್ ಮಾಡಿದ ನಂತರ ಅಲ್ಲೇ ಇದ್ದ ರೆಸ್ಟೋರೆಂಟ್ ನಲ್ಲಿ ಊಟವನ್ನು ಮಾಡಿದ್ದಾರೆ. ಮಧ್ಯಾಹ್ನದ ಶೋ ನೋಡಲು ಪಿಂಕ್ ಸ್ಕ್ವೇರ್ ಮಾಲ್ನಲ್ಲಿ ಆಕೆಯೊಂದಿಗೆ “ಆದಿಪುರುಷ್” ಸಿನಿಮಾ ವೀಕ್ಷಣೆಗೆ ತೆರಳಿದ್ದರು.
ಸಿನಿಮಾದಲ್ಲೊಂದು ಇಂಟರ್ವಲ್ ಬಂತು ಅಷ್ಟೆ ಆಮೇಲೆ ನಡೆದದ್ದು ಅಚಾನಕ. ಸಿನಿಮಾದಲ್ಲಿ ಬಂದದ್ದು ಕೇವಲ ಎಂಟರ್ವಲ್ ಅಷ್ಟೇ ಆದರೆ ಆತನ ಜೀವನದಲ್ಲಿ ಕ್ಲೈಮ್ಯಾಕ್ಸೇ ನಡೆದು ಹೋಗಿತ್ತು. ಪಾಪ್ಕಾರ್ನ್ ತರಲು ಹೋಗಿದ್ದ ಗಂಡ ವಾಪಸ್ ಬರುವಾಗ ಹೆಂಡ್ತಿ ಕಣ್ಮರೆಯಾಗಿದ್ದಳು.
ಪತ್ನಿ ಇದ್ದ ಸೀಟು ಖಾಲಿ ಇದ್ದದ್ದನ್ನು ನೋಡಿದ ಆತ ಅಕ್ಕ-ಪಕ್ಕದವರಲ್ಲಿ ವಿಚಾರಿಸಿದಾಗ ಆಕೆ ಹೊರಗೆ ಹೋಗಿದ್ದಾಳೆ ಎಂದಿದ್ದಾರೆ. ಬಳಿಕ ಸಿನಿಮಾ ಹಾಲ್ನಲ್ಲಿನ ಎಲ್ಲಾ ವಾಶ್ರೂಮ್ಗಳನ್ನು ಹುಡುಕಾಡಿದ್ದಾನೆ. ಆ ಬಳಿಕ ಒಬ್ಬ ವ್ಯಕ್ತಿ, ಹೆಂಗಸೊಬ್ಬರು ಥಿಯೇಟರ್ನಿಂದ ಹೊರಹೋಗುತ್ತಿದ್ದದ್ದನ್ನು ನೋಡಿದ್ದಾಗಿ ಕನರಾಮ್ಗೆ ತಿಳಿಸಿದ್ದಾರೆ.
ತಕ್ಷಣವೇ ಥಿಯೇಟರ್ ನಿಂದ ಹೊರಗೆ ಓಡಿ ಬಂದಿದ್ದ ಕನರಾಮ್, ಟ್ರಾನ್ಸ್ಪೋರ್ಟ್ ನಗರ ಬಸ್ ನಿಲ್ದಾಣಕ್ಕೆ ಬಂದಿದ್ದ. ಇದೇ ವೇಳೆ ತನ್ನ ಪತ್ನಿ ದೆಹಲಿಗೆ ಹೋಗುವ ಬಸ್ನಲ್ಲಿ ಹೋಗುತ್ತಿರುವುದನ್ನು ಕೊನೆಯದಾಗಿ ನೋಡಿದೆ ಎಂದು ಕನರಾಮ್ ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತಂತೆ ಪೊಲೀಸರು ನಾಪತ್ತೆಯ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತ್ನಿಯ ಬಗ್ಗೆ ಪೊಲೀಸರು ಮಾಹಿತಿ ಕೇಳಿದಾಗ, ಆಕೆ ಜೈಪುರದ ಶಹಪುರ ಪ್ರದೇಶದವರು ಎಂದು ತಿಳಿದುಬಂದಿದೆ. ಪತ್ನಿ ಪೋನ್ ಕೂಡ ಸ್ವಿಚ್ ಆಫ್ ಆಗಿರುವುದಾಗಿ ತಿಳಿಸಿದ್ದಾನೆ. ಜೂನ್ 25ರಂದು ಇವರಿಬ್ಬರ ವಿವಾಹವಾಗಿದ್ದರು, ರೇಖಾಗೆ ಈ ಮದುವೆ ಸಮ್ಮತವಿರಲಿಲ್ಲ.
