Master Anand: ನಟ ಮಾಸ್ಟರ್ ಆನಂದ್’ರವರು ಚಿಕ್ಕ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಬಾಲ ಕಲಾವಿದನಾಗಿ ಫೇಮಸ್ ಆದವರು. ಈಗ ನಟ ಹಾಗೂ ನಿರೂಪಕರಾಗಿ ಜನರ ಗಮನ ಸೆಳೆಯುತ್ತಿದ್ದಾರೆ. ಇದೀಗ ಅವರಿಗೆ ಮಹಾ ಮೋಸ ಆಗಿದೆ. ನಿವೇಶನ ನೀಡುವುದಾಗಿ ಹೇಳಿ ನಟನಿಗೆ ವಂಚಕರು ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾರೆ. ಈ ಕುರಿತು ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಿವೇಶನ ನೀಡುವುದಾಗಿ ನಂಬಿಸಿ 2020ರ ಸೆಪ್ಟಂಬರ್ ನಿಂದ 2021ರ ಅಕ್ಟೋಬರ್ ಅವಧಿಯಲ್ಲಿ 18.5 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆಂದು ಮಲ್ಟಿ ಲೀಪ್ ವೆಂಚರ್ಸ್ ಕಂಪನಿಯ ಸುಧೀರ್ ಹಾಗೂ ಅವರ ಆಪ್ತ ಸಹಾಯಕಿ ಮನಿಕಾ ಎಂಬುವರ ವಿರುದ್ಧ ನಟ ದೂರು ನೀಡಿದ್ದಾರೆ.
ಕೊಮ್ಮಘಟ್ಟದ ರಾಮಸಂದ್ರ ಗ್ರಾಮದದಲ್ಲಿ ಆನಂದ್(Master Anand) ನಿವೇಶನ ನೋಡಿದ್ದರು. ಶೂಟಿಂಗ್ಗಾಗಿ ತೆರಳಿದ್ದ ವೇಳೆ ಇವುಗಳ ವೀಕ್ಷಣೆ ಮಾಡಿದ್ದರು. ನಿವೇಶನ ಇಷ್ಟವಾದ ಬಳಿಕ ಖರೀದಿಸಲು ಮುಂದಾಗಿದ್ದಾರೆ. ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರುವುದಾಗಿಯೂ ಕಂಪನಿಯವರು ಹೇಳಿದ್ದರು.
ಆ ಬಳಿಕ ಮಲ್ಟಿ ಲೀಪ್ ವೆಂಚರ್ಸ್ ರಾಮಸಂದ್ರದ 200 ಅಡಿ ವಿಸ್ತೀರ್ಣದ ನಿವೇಶನ ತೋರಿಸಿದ್ದಾರೆ. 70 ಲಕ್ಷ ರೂಪಾಯಿಗೆ ಇದನ್ನು ಖರೀದಿಸಲು ಮಾಸ್ಟರ್ ಆನಂದ್ ಒಪ್ಪಿದ್ದರು. ಮುಂಗಡ ಹಣದ ರೂಪದಲ್ಲಿ 18.5 ಲಕ್ಷ ರೂಪಾಯಿ ಪಾವತಿಸಿದ್ದರು. ಕಂಪನಿಯವರು ಮಾಸ್ಟರ್ ಆನಂದ್ ಹಾಗು ಪತ್ನಿ ಯಶಸ್ವಿನಿ ಹೆಸರಲ್ಲಿ ಖರೀದಿ ಕರಾರು ಪತ್ರ ಮಾಡಿಕೊಟ್ಟಿದ್ದರು. ಆ ಬಳಿಕ ನಿವೇಶನವನ್ನು ಕಂಪನಿಯು ಬೇರೆಯವರಿಗೆ ಮಾರಾಟ ಮಾಡಿದೆ.
ಈ ಬಗ್ಗೆ ಆನಂದ್ ಅವರು ವಿಚಾರಿಸಿದಾಗ ಕಂಪೆನಿಯು ಯಾವುದೇ ಸ್ಪಂದನೆಯನ್ನು ನೀಡುತ್ತಿರಲಿಲ್ಲ. ಹಾಗೂ ಮುಂಗಡ ಹಣ ಸಹ ವಾಪಸ್ ಮಾಡಲಿಲ್ಲ. ಹೀಗಾಗಿ ಮಾಸ್ಟರ್ ಆನಂದ್ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ದ ಎಫ್ ಐ ಆರ್ ಕೂಡ ದಾಖಲಾಗಿದೆ.
