Kalaburgi primary teacher: ಸರಕಾರಿ ಶಾಲಾ ಶಿಕ್ಷಕನೊಬ್ಬ ತನ್ನ ಬದಲಾಗಿ ಮಹಿಳೆಯೊಬ್ಬಳನ್ನು ಪಾಠ ಹೇಳಿಕೊಡಲು ನೇಮಿಸಿರುವ ವಿಚಿತ್ರ ಪ್ರಕರಣ ಒಂದು ಕಲಬುರಗಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ(Kalaburgi primary teacher) ನಡೆದಿದೆ.
ಕಲಬುರಗಿಯ(Kalaburgi) ವಾಡಿ ಸಮೀಪದ ಬಾಳಿನಾಯ್ಕ ತಾಂಡಾದ ಸರಕಾರಿ ಪ್ರಾಥಮಿಕ ಶಾಲೆ ಇದಾಗಿದ್ದು, ಇಲ್ಲಿ ಕೇವಲ 25 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರಿದ್ದಾರೆ. ಆರೋಪ ಹೊತ್ತಿರುವ ಶಿಕ್ಷಕ, ಮಹೇಂದ್ರ ಕುಮಾರ್ ಅವರನ್ನು ಹೊರತುಪಡಿಸಿ ಶಾಲೆಯ ಮುಖ್ಯಶಿಕ್ಷಕ ಅಯ್ಯಪ್ಪ ಗುಂಡಗುರ್ತಿ ಈ ಶಾಲೆಯಲ್ಲಿದ್ದಾರೆ.
ಮಹೇಂದ್ರ ಕುಮಾರ್ ಶಾಲೆಗೆ ಸರಿಯಾಗಿ ಬರುತ್ತಿರಲಿಲ್ಲ. ವಾರಕ್ಕೆ ಎರಡು ದಿನ ಮಾತ್ರ ಶಾಲೆಗೆ ಆಗಮಿಸುತ್ತಿದ್ದು, ಕೇವಲ ಹಾಜರಾತಿ ನೋಂದಣಿಗೆ ಸಹಿ ಹಾಕಿ ಹೋಗುತ್ತಿದ್ದರು. ಇವನ ನಿರಂತರ ಗೈರಿನಿಂದಾಗಿ ಬೇಸತ್ತ ಪೋಷಕರು ಮುಖ್ಯ ಶಿಕ್ಷಕರ ಬಳಿ ದೂರನ್ನು ನೀಡಿದ್ದರು. ಇದರಿಂದಲೂ ಸುಧಾರಣೆ ಹೊಂದದ ಮಹೇಂದ್ರ ಕುಮಾರ್ ನ ಬಗ್ಗೆ ಡಿಡಿಪಿಐಗೆ (DDPI) ದೂರು ನೀಡಲು ಪೋಷಕರು ಸಿದ್ಧತೆ ನಡೆಸಿದ್ದರು. ಇದನ್ನು ಅರಿತ ಶಿಕ್ಷಕನು, ಕೂಡಲೇ ಬೇರೊಬ್ಬ ಶಿಕ್ಷಕಿಯನ್ನು ನೇಮಿಸಿದ್ದಾನೆ. ಹಾಗೂ ಅವರಿಗೆ ಮಾಸಿಕ 6 ಸಾವಿರ ರೂ. ನೀಡುತ್ತಿದ್ದಾನೆ.
ಇನ್ನು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಮಹೇಂದ್ರ ಕುಮಾರ್, ಅನಾರೋಗ್ಯದ ಕಾರಣದಿಂದ ನಾನು ದೀರ್ಘ ರಜೆಯಲ್ಲಿ(LONG LEAVE) ಇರಬೇಕಾಗಿತ್ತು. ಆದ್ದರಿಂದ ನನ್ನ ಬದಲು ಮಕ್ಕಳಿಗೆ ಪಾಠ ಮಾಡಲು ಶಿಕ್ಷಕಿಯನ್ನು ನೇಮಿಸಿದೆ ಎಂದಿದ್ದಾರೆ. ವಾಪಸ್ ಉದ್ಯೋಗಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಲಬುರಗಿ ಡಿಡಿಪಿಐ ಶೇಖರಪ್ಪಗೌಡ ಬಿರಾದಾರ್, ಶಿಕ್ಷಕರು(teacher) ತಮ್ಮ ಬದಲಿಗೆ ಮತ್ತೊಬ್ಬರನ್ನು ನೇಮಿಸುವುದು ಅಪರಾಧ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ.
ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ ಸರಕಾರಿ ಶಾಲೆಗಳು ಬಳಿಕ ಖಾಸಗಿ ಶಾಲೆಗಳ ಆಕರ್ಷಣೆ ಮತ್ತು ಇಂಗ್ಲಿಷ್ ಮಾಧ್ಯಮದ ಅಬ್ಬರದಲ್ಲಿ ಬೇಡಿಕೆ ಕಳೆದುಕೊಳ್ಳುತ್ತಾ ಸಾಗಿದವು. ಕೆಲವು ವರ್ಷಗಳಲ್ಲಿ ಸಾವಿರಾರು ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚಿಹೋದವು. ಇದಕ್ಕೆ ಮುಖ್ಯ ಕಾರಣ ಸರಿಯಾದ ಗುಣಮಟ್ಟದ ಶಿಕ್ಷಕರು, ಉತ್ತಮ ಶಿಕ್ಷಣ ಪದ್ಧತಿ ವ್ಯವಸ್ಥೆ, ಶಾಲಾ ಸೌಕರ್ಯಗಳು ಇಲ್ಲದೆ ಇರುವುದು. ಅಲ್ಲದೇ ಇಂತಹ ಶಿಕ್ಷಕರಿದ್ದರಂತೂ ಪೋಷಕರು ಸರಕಾರಿ ಶಾಲೆಗಳಿಗೆ ಕಳಿಸಲು ಹಿಂಜರಿಯುತ್ತಾರೆ. ಇಂತಹ ಶಿಕ್ಷಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದರಿಂದ ಸರಕಾರಿ ಶಾಲಾ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯವು ಉತ್ತಮವಾಗಿರುವುದರಲ್ಲಿ ಎರಡು ಮಾತಿಲ್ಲ.
