Mangaluru: ಮುರುಡೇಶ್ವರದ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿ ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ವಾಸಿಸುವ ಮುನ್ನವೇ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ವ್ಯಕ್ತಿಯೊಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೌದು, ಮೃತ ವ್ಯಕ್ತಿಯನ್ನು ಮಂಗಳೂರಿನ(Mangaluru) ಪಡೀಲು ವೀರನಗರ ನಿವಾಸಿ ಉದಯ್ ಕುಮಾರ್ (46) ಎಂದು ಗುರುತಿಸಲಾಗಿದೆ. ಪದವಿನಂಗಡಿಯಲ್ಲಿ ಕಟ್ಟಡ ಕಾಮಗಾರಿಯ ಬಿಡಿಭಾಗಗಳ ಮಾರಾಟದ ಅಂಗಡಿ ಹೊಂದಿರುವ ಅವರು ಮಧ್ಯಾಹ್ನ ದ್ವಿಚಕ್ರ ವಾಹನ ಸಹಿತ ತನ್ನಲ್ಲಿದ್ದ ಸೊತ್ತುಗಳನ್ನು ತೆಗೆದಿರಿಸಿ ನೀರಿಗೆ ಹಾರಿದ್ದಾರೆ. ಸಮುದ್ರ ತೀರದಲ್ಲಿದ್ದ ಯುವಕನೋರ್ವ ಈ ವಸ್ತುಗಳನ್ನು ಕಂಡು ಸಮೀಪದ ಅಂಗಡಿಯವರಿಗೆ ನೀಡಿದ್ದು, ಅವರು ಉಳ್ಳಾಲ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.
ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬಂದಿ ಸಹಿತ ಸ್ಥಳೀಯ ಈಜುಗಾರರು ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಉಳ್ಳಾಲದ ಸೋಮೇಶ್ವರ ರುದ್ರಪಾದೆಯಿಂದ ಮದ್ಯಾಹ್ನ ವೇಳೆ ಸಮುದ್ರಕ್ಕೆ ಹಾರಿದ ಅವರ ಮೃತದೇಹ ಸಮೀಪದ ಅಲಿಮಕಲ್ಲು ಎಂಬಲ್ಲಿ ಸಂಜೆ ಹೊತ್ತಿಗೆ ಪತ್ತೆಯಾಗಿದೆ.
