Belthangady : ಶನಿವಾರ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ತೆಕ್ಕಾರು ನಿವಾಸಿ ಇಬ್ರಾಹಿಂ.ಎಸ್.ಬಿ ದೂರು ದಾಖಲಿಸಿದ್ದರು. ಇದೀಗ ಹರೀಶ್ ಪೂಂಜಾ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ದೇವಸ್ಥಾನ ಆಡಳಿತಕ್ಕೆ ಮುಸ್ಲಿಂ ಒಕ್ಕೂಟದ ಪತ್ರ ಬರೆದಿದೆ.
ಹೌದು, ದೇವಸ್ಥಾನ ಆಡಳಿತಕ್ಕೆ ತೆಕ್ಕಾರು ಗ್ರಾಮದ ಮುಸ್ಲಿಮ್ ಒಕ್ಕೂಟದ ಪತ್ರ ಬರೆದಿದ್ದು, ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾರಿಗೆ ಮಾತನಾಡಲು ಅವಕಾಶ ಕೊಟ್ಟಿರುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಶಾಸಕರು ತೆಕ್ಕಾರು ಪರಿಸರದ ಸೌಹಾರ್ದತೆಯನ್ನು ಕೆಡಿಸುವ ಪ್ರಯತ್ನ ಮಾಡಿದ್ದಾರೆ, ಈ ಬೆಳವಣಿಗೆಯಿಂದ ಮುಸ್ಲಿಮರಿಗೆ ನೋವುಂಟಾಗಿದೆ. ಭಕ್ತಾಧಿಗಳ ವಾಹನ ನಿಲ್ಲಿಸಲು ಮುಸ್ಲಿಮರ ಜಮೀನು ಬಳಕೆ ಮಾಡಲಾಗಿದೆ. ಕ್ಷೇತ್ರದ ಟ್ಯೂಬ್ ಲೈಟ್, ಡೀಸೆಲ್ ಕದ್ದ ಆರೋಪ ಮುಸ್ಲಿಮರ ಮೇಲೆ ಹೊರಿಸಲಾಗಿದೆ, ಇದಕ್ಕೆ ಸೂಕ್ತ ಸಾಕ್ಷಿಯನ್ನು ಒದಗಿಸಬೇಕು ಎಂದಿದ್ದು, ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹರೀಶ್ ಪೂಂಜ ಹೇಳಿದ್ದೇನು?
ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾಸಕ ಹರೀಶ್ ಪೂಂಜಾ ದೇವಾಲಯದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಮುಸ್ಲಿಂ ಮಸೀದಿಗಳಿಗೆ ಏಕೆ ನೀಡಿದ್ದೀರಿ? ನಮಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ನೀವು ಮುಸ್ಲಿಮರಿಗೆ ಆಹ್ವಾನ ಪತ್ರಿಕೆ ನೀಡಿದ್ದರಿಂದಲೇ ಅವರು ಟ್ಯೂಬ್ಲೈಟ್ ಒಡೆದಿದ್ದಾರೆ” ಎಂದಿದ್ದರು
