Prajwal Revanna: ಅಶ್ಲೀಲ ವಿಡಿಯೋ (obscene video) ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜೈಲುವಾಸ ಅನುಭವಿಸುತ್ತಿದ್ದಾರೆ. ಇತ್ತ ತನಿಖೆ ಕೂಡ ಚುರುಕಾಗಿ ನಡೆಯುತ್ತಿದೆ. ಈ ನಡುವೆ ಪ್ರಜ್ವಲ್ ರೇವಣ್ಣ ಕಾರಿನ ಚಾಲಕ ಕಾರ್ತಿಕ್ ಕೋರ್ಟ್ ಮುಂದೆ ಸ್ಫೋಟಕ ಸಾಕ್ಷ್ಯ ನುಡಿದಿದ್ದಾರೆ.
ಹೌದು, ಕಾರು ಚಾಲಕ ಕಾರ್ತಿಕ್ ಅವರು ಪ್ರಜ್ವಲ್ ರೇವಣ್ಣ ಮೊಬೈಲ್ ನಲ್ಲಿ 2000 ಅಶ್ಲೀಲ ಫೋಟೋ, 40 ರಿಂದ 50 ವಿಡಿಯೋಗಳಿದ್ದವು ಎಂದು (ಮೇ 26) ಜನಪ್ರತಿನಿಧಿಗಳ ವಿಶೇಷ ಕೋರ್ಟ್ (Special Court) ನಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಅಲ್ಲದೇ ಮೊಬೈಲ್ ನಲ್ಲಿದ್ದ ಅಶ್ಲೀಲ ವಿಡಿಯೋಗಳು ಹೇಗೆ ಸಿಕ್ಕವು ಎನ್ನುವ ಬಗ್ಗೆ ಕೋರ್ಟ್ ಮುಂದೆ ಹೇಳಿದ್ದಾರೆ.
ಕಾರು ಚಾಲಕ ಕಾರ್ತಿಕ್ ಹೇಳಿದ್ದೇನು?
2009 ರಿಂದ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಬಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೆ. ನಂತರ ಭವಾನಿ ರೇವಣ್ಣ ಹಾಗೂ ಸೂರಜ್ ರೇವಣ್ಣ ಅವರ ಕಾರಿಗೂ ನಾನು ಚಾಲಕನಾಗಿದ್ದೆ ನಂತರ 2018 ರಿಂದ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕನಾಗಿ ಕೆಲಸ ಆರಂಭಿಸಿದೆ.
ಪ್ರಜ್ವಲ್ ರೇವಣ್ಣ ಚಾಲಕನಾಗಿ ಕ್ಷೇತ್ರ ಸಂಚಾರ ಮಾಡುತ್ತಿದೆ. ಮೊಬೈಲ್ ನಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ದೃಶ್ಯ ವೀಕ್ಷಿಸುತ್ತಿದ್ದರು. ನಾನು ಅವರ ಕಡೆ ನೋಡಿದಾಗ ಫೋನ್ ತಿರುಗಿಸಿಕೊಳ್ಳುತ್ತಿದ್ದರು. ಜಯನಗರದ ಅವರ ಗೆಳತಿ ಮನೆಗೆ ಹೋದಾಗ ಕಾರಿನಲ್ಲಿ ಮೊಬೈಲ್ ಬಿಟ್ಟಿದ್ದರು. ಪ್ರಜ್ವಲ್ ರೇವಣ್ಣ ಅವರ ಮೊಬೈಲ್ ಪಾಸ್ವರ್ಡ್ ನನಗೆ ತಿಳಿದಿತ್ತು. ಮೊಬೈಲ್ ತೆಗೆದು ನೋಡಿದಾಗ ಅಶ್ಲೀಲ ಫೋಟೋ ವಿಡಿಯೋ ಗಳಿದ್ದವು. ಮೊಬೈಲಲ್ಲಿ ಸುಮಾರು 2000 ಅಶ್ಲೀಲ ಫೋಟೋ 30 ರಿಂದ 40 ಮಹಿಳೆಯರ ಅಶ್ಲೀಲ ವಿಡಿಯೋಗಳಿದ್ದವು.
ಭವಾನಿ ರೇವಣ್ಣರಿಗೆ ತೋರಿಸಲೆಂದು ಇವುಗಳನ್ನು ವರ್ಗಾಯಿಸಿಕೊಂಡೆ ಮಗನಿಗೆ ಬುದ್ಧಿ ಹೇಳಲಿ ಎಂದು ಭವಾನಿ ರೇವಣ್ಣ ಅವರಿಗೆ ಮಾಹಿತಿ ನೀಡಿದ್ದೆ. ಅವರು ಫೋಟೋ ವಿಡಿಯೋ ತಮಗೆ ಕಳುಹಿಸಲು ಕೋರಿದರು. ಬೇರೆಲ್ಲೂ ಈ ವಿಷಯ ಬಹಿರಂಗಪಡಿಸದಂತೆ ಮನವಿ ಮಾಡಿದ್ದರು. ಇದಾದ ಬಳಿಕ ಭವಾನಿ ರೇವಣ್ಣ ಪ್ರಜ್ವಲ್ ಜೊತೆಗೆ ಮಾತು ಬಿಟ್ಟಿದ್ದರು. ಹುಟ್ಟುಹಬ್ಬಕ್ಕೆ ಭವಾನಿ ಶುಭ ಕೋರಿದಾಗ ಪ್ರಜ್ವಲ್ ಅವರು ಪ್ರತಿಕ್ರಿಯಿಸಲಿಲ್ಲ. ವಿಡಿಯೋ ಬಗ್ಗೆ ತಿಳಿಸಿದ್ದು ಯಾರೆಂದು ಕೇಳಿದಾಗ ಅವರು ನನ್ನ ಹೆಸರು ಹೇಳಿದರು. ಪ್ರಜ್ವಲ್ ನನಗೆ ಆಗ ಬೈದರು ಎಂದಿದ್ದಾರೆ.
ಇದಾದ ಬಳಿಕ ನಮ್ಮ ನಡುವೆ ಜಗಳವಾಗಿ 2022ರಲ್ಲಿ ನಾನು ಕೆಲಸ ಬಿಟ್ಟೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೇಸ್ ಕೂಡಾ ಹಾಕಿದ್ದೆ. ಆಸ್ತಿ ವಿವಾದ ಬಗೆಹರಿಸುತ್ತೇನೆ ಕೆಲಸಕ್ಕೆ ಬರುವಂತೆ ಕರೆದಿದ್ದರು. ಆದರೆ ವಿಡಿಯೋ ಬಹಿರಂಗಪಡಿಸದಂತೆ ತಡೆಯಾಜ್ಞೆ ತಂದರು. ನನ್ನನ್ನು ಪ್ರತಿವಾದಿ ಮಾಡಿದ್ದರಿಂದ ವಕೀಲ ದೇವರಾಜೇಗೌಡರನ್ನು ಸಂಪರ್ಕಿಸಿದೆ. ಸಾಕ್ಷಿಯಾಗಿ ಫೋಟೋಗಳನ್ನು ನೀಡುವಂತೆ ಸೂಚಿಸಿದ್ದರಿಂದ ಪೆನ್ ಡ್ರೈವ್ ನಲ್ಲಿ ನೀಡಿದೆ. ಆದ್ರೆ, ಚುನಾವಣೆ ವೇಳೆ ಫೋಟೋ, ವಿಡಿಯೋಗಳು ಬಹಿರಂಗಗೊಂಡವು ಎಂದು ಕಾರ್ತಿಕ್, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದಿದ್ದಾರೆ.
