Puttur kambala: ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ದ ಎದುರು ಗದ್ದೆಯಲ್ಲಿ ಈ ಬಾರಿ 32ನೇ ವರ್ಷದ ಕೋಟಿ – ಚೆನ್ನಯ ಜೋಡುಕರೆ ಕಂಬಳ (Puttur kambala) ಸಮಾಪನಗೊಂಡಿತು. ಎರಡು ದಿನಗಳ ಕಾಲ ಕಂಬಳದಲ್ಲಿ ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಅವರ ರಾಜೆ ಹಾಗೂ ಶಬರೀಶ ಕೋಣಗಳು ಜಯ ಸಾಧಿಸಿವೆ. ನಂದಳಿಕೆ ಶ್ರೀಕಾಂತ್ ಭಟ್ ಅವರ ಮೋಡೆ ಹಾಗೂ ಕಾಟಿ ಎರಡನೇ ಸ್ಥಾನ ಪಡೆಯಿತು.
ಕನಹಲಗೆಯಲ್ಲಿ ಹಂಕರಜಾಲು ಶ್ರೀನಿವಾಸ ಬಿರ್ಮಣ್ಣ ಶೆಟ್ಟಿ ಪ್ರಥಮ, ಬೈಂದೂರು ಸಸಿಹಿತ್ತು ವೆಂಕಟ ಪೂಜಾರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಅಡ್ಡ ಹಲಗೆಯಲ್ಲಿ ಪುತ್ತೂರು ಸರೋವರ ಹವೀಶ ಹರೀಶ್ ಶಾಂತಿ ಅವರ ಬಾಬು ಹಾಗೂ ಕರ್ಣೆ ಕೋಣಗಳು ಗೆಲುವು ಪಡೆದುಕೊಂಡಿತು. ಬೋಳಾರ ತ್ರಿಶಾಲ್ ಕೆ. ಪೂಜಾರಿ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದುಕೊಂಡಿತು.
ಹಗ್ಗ ಕಿರಿಯದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ ಶೆಟ್ಟಿ ಅವರ ಬೊಲ್ಲೆ ಹಾಗೂ ಪಾಂತೆ ಪ್ರಥಮ ಸ್ಥಾನ ಪಡೆದುಕೊಂಡಿತು. ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕಾಂತ್ ಸಂದೀಪ್ ಶೆಟ್ಟಿ ಬಿ. ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದುಕೊಂಡಿತು.
ನೇಗಿಲು ಹಿರಿಯದಲ್ಲಿ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಅವರ ದಾಸ ಹಾಗೂ ಹೊನ್ನು ಕೋಣ ಪ್ರಥಮ. ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆಯಿತು.
ನೇಗಿಲು ಕಿರಿಯದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಅಪ್ಪು ಹಾಗೂ ಜಿಂಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಮಿಜಾರು ಹರಿಮೀನಾಕ್ಷಿ ದೋಟ ಹರಿಯಪ್ಪ ಶೆಟ್ಟಿ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದಿದೆ.
