Bengaluru Stampede: ಎಮ್ಮೆಗೆ ಜ್ವರ, ಎತ್ತಿಗೆ ಬರೆ ಅನ್ನುವ ಪರಿಸ್ಥಿಯೊಳಗೆ ರಾಜ್ಯ ಸರ್ಕಾರ ತನ್ನ ತಪ್ಪನ್ನು ಮುಚ್ಚಿ ಹಾಕಲು ಸತತ ಪ್ರಯತ್ನದಲ್ಲಿ ಮಗ್ನವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ಹಲವರು ಅಧಿಕಾರಿಗಳ ಈಗಾಗಲೇ ತಲೆದಂಡವಾಗಿದೆ. ಇದೀಗ ಗುಪ್ತಚರ ಇಲಾಖೆಯ ಎಡಿಜಿಪಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಎಡಿಜಿಪಿ ಹೇಮಂತ್ ನಿಂಬಾಳ್ಕರ್ನ್ನು ಎತ್ತಂಗಡಿ ಮಾಡಲಾಗಿದೆ. ಅವರ ಸ್ಥಾನಕ್ಕೆ ಎಸ್ ರವಿ ಅವರನ್ನು ನೇಮಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಗುಪ್ತಚರ ವೈಫಲ್ಯವಾಗಿದೆ ಎಂದು ನಿನ್ನೆ ಹೇಳಿದ್ದರು. ಜೊತೆಗೆ ಒತ್ತಡ ಹೆಚ್ಚಾಗಿದ್ದರಿಂದ ಹೇಮಂತ್ ನಿಂಬಾಳ್ಕರ್ರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಸ್ಥಳ ತೋರಿಸದೇ ಹಿರಿಯ ಅಧಿಕಾರಿಯ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಎಂಎಲ್ಸಿ ಗೋವಿಂದ ರಾಜುಗೂ ಕೋಕ್ ಕೊಡಲಾಗಿದೆ. ಇದರೊಂದಿಗೆ ಕಾಲ್ತುಳಿತ ಪ್ರಕರಣದಲ್ಲಿ 8ನೇ ತಲೆದಂಡವಾದಂತಾಗಿದೆ.
ಕಾಲ್ತುಳಿತಕ್ಕೆ ಗುಪ್ತಚರ ಇಲಾಖೆ ವೈಫಲ್ಯ ಕಾರಣ ಎಂದು ಸಿಎಂ ಒಪ್ಪಿಕೊಂಡಿದ್ದರು. ಸಿಎಂ ಮಾತು ಸತ್ಯ ಎಂದು ಬಿಜೆಪಿ ಹೇಳಿತ್ತು. ಗುಪ್ತಚರ ಇಲಾಖೆಯ ಅಧಿಕಾರಿಗಳನ್ನು ಯಾಕೆ ಮುಟ್ಟಿಲ್ಲ? ಗುಪ್ತಚರ ಇಲಾಖೆ ಖಾತೆ ಸಿಎಂ ಬಳಿಯೇ ಇದೆ. ಹೀಗೆ ಮುಂದುವರಿದರೆ ಸಿಎಂ ಬುಡಕ್ಕೂ ಬರುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಒಬ್ಬೊಬ್ಬರಾಗೆ ತಲೆದಂಡವಾಗುತ್ತಿದೆ
