Sowjanya case: ಬೆಳ್ತಂಗಡಿಯ ಸೌಜನ್ಯ ಹತ್ಯೆ(Sowjanya case) ಪ್ರಕರಣವನ್ನು ಸರಕಾರ ಮರು ತನಿಖೆಗೆ ಒಳಪಡಿಸಿ ನೈಜ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸುಳ್ಯ ಗೌಡ ಯುವ ಸೇವಾ ಸಂಘ ಒತ್ತಾಯಿಸಿದೆ.
ಆ.1ರಂದು ಸುಳ್ಯ ಪ್ರಮುಖ ರಸ್ತೆಯ ಮೂಲಕ ವಾಹನ ಜಾಥಾ ನಡೆಸಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಸರಕಾರವನ್ನು ಒತ್ತಾಯಿಸಲು ನಿರ್ಧರಿಸಿದೆ ಎಂದು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಬೆಳ್ತಂಗಡಿ ಸೌಜನ್ಯ ಹತ್ಯೆ ಪ್ರಕರಣ 2011ರಲ್ಲಿ ನಡೆದು ಇಂದಿಗೆ 11 ವರ್ಷಗಳಾಗಿವೆ, ಅಲ್ಲಿ ಅನ್ಯಾಯಕ್ಕೆ ಒಳಗಾದ ಹೆಣ್ಣು ಮಗಳಿಗೆ ಆದ ಅನ್ಯಾಯಕ್ಕೆ ಇದುವರೆ ನ್ಯಾಯ ಸಿಕ್ಕಿಲ್ಲ. ಹಿಂದೆ ಬಂಧಿತನಾದ ಆರೋಪಿತ ವ್ಯಕ್ತಿ ನಿರಾಪರಾಧಿಯೆಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ಈ ಪ್ರಕಣವನ್ನು ಮರು ತನಿಖೆ ನಡೆಸಿ ನೈಜ ಆರೋಪಿಗಳ ಪತ್ತೆಮಾಡಿ ಅವರಿಗೆ ಶಿಕ್ಷೆಯಾಗಬೇಕೆಂದು ನಾವು ಸರಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.
ಆ.1ರಂದು ಸುಳ್ಯದ ವೆಂಕಟರಮಣ ಸೊಸೈಟಿ ಬಳಿಯಿಂದ ಬೆಳಗ್ಗೆ 10 ಗಂಟೆಗೆ ವಾಹನ ಜಾಥಾದ ಮೂಲಕ ಸುಳ್ಯ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಸಾಗಿ ಸುಳ್ಯ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೆವೆ ಎಂದು ಅವರು ವಿವರ ನೀಡಿದರು.
ಅಂದು ಘಟನೆ ನಡೆದ ಎರಡು ದಿನದಲ್ಲಿ ನಾವು ಸುಳ್ಯ ಗೌಡ ಸಮಾಜದವರು ಬೆಳ್ತಂಗಡಿಯ ಸೌಜನ್ಯಳ ಮನೆಗೆ ಹೋಗಿ ಸಾಂತ್ವನ ಹೇಳಿದ್ದೇವೆ. ಅಲ್ಲದೇ ಆ ಬಳಿಕ ಆದಿಚುಂಚನಗಿರಿ ಸ್ವಾಮೀಜಿಯವರು ಬಂದಾಗಲೂ ಹೋಗಿ ಸೌಜನ್ಯ ಮನೆಯವರಿಗೆ ನಮ್ಮಿಂದಾದ ಸಹಾಯ ನೀಡಿದ್ದೆವು. ಆ ಮನೆ ಮಗಳಿಗೆ ನ್ಯಾಯ ಸಿಗಲು ಗೌಡ ಸಂಘ ಒತ್ತಾಯಿಸುತ್ತದೆ ಮತ್ತು ಈ ರೀತಿಯ ಘಟನೆ ಸಮಾಜದಲ್ಲಿ ಮತ್ತೆಂದೂ ನಡೆಯಬಾರದು ಎಂದ ಅವರು ಬೇರೆ ಬೇರೆ ತನಿಖಾ ಸಂಸ್ಥೆಗಳು ನಮ್ಮಲ್ಲಿವೆ. ಅದಕ್ಕೆ ತನಿಖೆಗೆ ನೀಡುವುದಕ್ಕಿಂತ ಕರ್ನಾಟಕ ಪೋಲೀಸರಿಗೆ ಇದರ ತನಿಖೆಯ ಹೊಣೆ ನೀಡಬೇಕು. ಯಾವುದೇ ಒತ್ತಡ ಹೇರದೆ ಫ್ರೀ ಹ್ಯಾಂಡ್ ನೀಡಿದರೆ 24 ಗಂಟೆಯೊಳಗೆ ಆರೋಪಿಯನ್ನು ನಮ್ಮ ಪೋಲೀಸರು ಬಂಧಿಸುತ್ತಾರೆಂಬ ವಿಶ್ವಾಸ ನಮಗಿದೆ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ನಮ್ಮ ಸಮಾಜದ ಕುರಿತು ಅವಹೇಳನ ಸಂದೇಶ ಹರಿದಾಡುತ್ತಿದ್ದು ಇದು ಸರಿಯಾದ ಕ್ರಮವಲ್ಲ. ನಮ್ಮ ಸಂಘಟನೆ ಸಮಾಜದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ನ್ಯಾಯದ ಪರ ನಿರಂತರವಾಗಿ ನಾವು ಧ್ವನಿಯಾಗಿರುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೌಡ ಸಂಘದ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ, ಎಂ.ಜಿ.ಎಂ.ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ರಾಧಾಕೃಷ್ಣ ಗೌಡ ಸಂಘದ ಪ್ರಮುಖರಾದ ಎ.ವಿ.ತೀರ್ಥರಾಮ, ಡಾ| ಎನ್.ಎ.ಜ್ಞಾನೇಶ್, ಪಿ.ಎಸ್.ಗಂಗಾಧರ್, ಕೂಸಪ್ಪ ಗೌಡ ಮುಗುಪ್ಪು, ಚಿದಾನಂದ ಕಾಡುಪಂಜ, ಪುರುಷೋತ್ತಮ ಬೊಡ್ಡನಕೊಚ್ಚಿ, ಉಮೇಶ್ ಕೆ.ಎಂ.ಬಿ., ರಮಾನಂದ ಬಾಳೆಕಜೆ, ಶ್ರೀಮತಿ ವಿನುತಾ ಪಾತಿಕಲ್ಲು ವೀರಪ್ಪ ಗೌಡ ಕಣಲ್, ತೀರ್ಥರಾಮ ಅಡ್ಕಬಳೆ, ಜಯರಾಮ ಪಿಂಡಿಬನ, ಗಿರೀಶ್ ಡಿ.ಎಸ್, ಸುರೇಶ್ ಅಮೈ ಮತ್ತಿತರರು ಉಪಸ್ಥಿತರಿದ್ದರು
.
