Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthalal ಮತ್ತು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮೇಲೆ ಷಡ್ಯಂತ್ರ ನಡೆಯುತ್ತಿದೆ. ಸುಖಾಸುಮ್ಮನೆ ಅವರ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳದ ಗ್ರಾಮಸ್ಥರು ಮಾ. 27 ರಂದು ಬೃಹತ್ ಸಮಾವೇಶವನ್ನು ಕೈಗೊಂಡರು.
ಸಮಾವೇಶಕ್ಕೂ ಮುನ್ನ ಧರ್ಮಸ್ಥಳದ ಅಣ್ಣಪ್ಪ ಬೆಟ್ಟಕ್ಕೆ ತೆರಳಿದ ಗ್ರಾಮಸ್ಥರು ಅಣ್ಣಪ್ಪ ಸ್ವಾಮಿ ಮುಂದೆ ತಮ್ಮ ನೋವನ್ನು ವ್ಯಕ್ತಪಡಿಸಿ ಅಲ್ಲಿ 12 ತೆಂಗಿನಕಾಯಿ ಒಡೆದು ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಅಮೃತವರ್ಷಿಣಿಯಲ್ಲಿ ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆಯಿಂದ ಧರ್ಮಸ್ಥಳ ಗ್ರಾಮಸ್ಥರ ಬೃಹತ್ ಸಮಾವೇಶ ನಡೆಯಿತು.
ಈ ವೇಳೆ ಮಾತನಾಡಿದ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೇಶವ ಪಿ ಬೆಳಾಲು, ಕ್ಷೇತ್ರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರ ಬಗ್ಗೆ ಯಾರು ಅವಹೇಳನ ಮಾಡುತ್ತಿದ್ದರೋ ಅದು ಹದಿನೈದು ದಿನಗಳಲ್ಲಿ ಅಂತ್ಯ ಆಗಬೇಕು. ಅಂತಹವರಿಗೆ ದೇವರು ಸರಿಯಾದ ಶಿಕ್ಷೆ ಕೊಡಬೇಕು ಎಂದು ಹೇಳಿದರು.
