Home » High Court: ಈ ರೀತಿ ಸಾಲ ಮಾಡಿದ್ರೆ ಆಸ್ತಿ ಜಪ್ತಿ ಮಾಡಲು ಅವಕಾಶವಿಲ್ಲ – ಹೈಕೋರ್ಟ್ ನೀಡಿದ ಮಹತ್ವದ ಆದೇಶ !

High Court: ಈ ರೀತಿ ಸಾಲ ಮಾಡಿದ್ರೆ ಆಸ್ತಿ ಜಪ್ತಿ ಮಾಡಲು ಅವಕಾಶವಿಲ್ಲ – ಹೈಕೋರ್ಟ್ ನೀಡಿದ ಮಹತ್ವದ ಆದೇಶ !

0 comments
High Court

High Court: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಜಮೀನುಗಳ ಹಸ್ತಾಂತರ ನಿಷೇಧ) ಕಾಯ್ದೆ (ಪಿಟಿಸಿಎಲ್)ಯಡಿ ಮಂಜೂರು ಆದ ಜಮೀನನ್ನು ಜಿಪಿಎ ಮಾಡಿಕೊಂಡ ಗೃಹ ನಿರ್ಮಾಣ ಸಂಘವು ಬ್ಯಾಂಕ್‌ವೊಂದರಿಂದ ಪಡೆದ ಸಾಲಕ್ಕೆ ಆಸ್ತಿ ಜಪ್ತಿ ಮಾಡಲು ಹೊರಟಿತ್ತು. ಆದರೆ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಈ ಕಾಯ್ದೆಯಡಿ ಮಂಜೂರಾದ ಜಮೀನನ್ನು ಭೂ ಮಾಲೀಕರಿಗೆ ಮರು ಸ್ಥಾಪಿಸಿ ಆದೇಶಿಸಿದ್ದ ಜಿಲ್ಲಾಧಿಕಾರಿ ಕ್ರಮ ಪ್ರಶ್ನಿಸಿ ಜಮೀನು ಅಡಮಾನ ಇಟ್ಟು ಸಾಲ ಕೊಟ್ಟಿದ್ದ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಜಮೀನು ಮಾಲೀಕರಿಗೆ ಬ್ಯಾಂಕ್‌ನಿಂದ ಪಡೆದ ಸಾಲದಿಂದ ಯಾವುದೇ ಲಾಭವಿಲ್ಲ. ಅಲ್ಲದೆ, ಬ್ಯಾಂಕ್ ಮತ್ತು ಜಮೀನು ಮಾಲೀಕರ ನಡುವೆ ಒಪ್ಪಂದವೂ ಆಗಿಲ್ಲ. ಆದರೆ, ಜಮೀನಿನ ಹಕ್ಕು ಹೊಂದಿರದ ಗೃಹ ನಿರ್ಮಾಣ ಸೊಸೈಟಿಯು ಆಸ್ತಿಯನ್ನು ಮತ್ತೊಂದು ಬ್ಯಾಂಕಿಗೆ ಅಡವಿಟ್ಟು ಸಾಲ ಪಡೆದಿದೆ. ಹೀಗಾಗಿ ಜಮೀನನ್ನು ಹರಾಜು ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.

ಪ್ರಕರಣದಲ್ಲಿ ಭೂ ಮಾಲೀಕರಿಗೂ ಸಾಲ ನೀಡಿದ ಬ್ಯಾಂಕ್‌ಗೂ ಯಾವುದೇ ಸಂಬಂಧವಿಲ್ಲ. ಕಾಯ್ದೆಯಡಿ ಜಮೀನು ಪರಭಾರೆ ಮಾಡುವುದು ಅಥವಾ ಹಸ್ತಾಂತರಿಸುವುದು ನಿಷೇಧವಿದೆ. ಆದರೂ, ಅಂತಹ ಜಮೀನಿನ ಮೇಲೆ ಬ್ಯಾಂಕ್ ಸೇರಿ ಇತರ ಸಂಸ್ಥೆಗಳಿಂದ ಸಾಲ ಪಡೆದುಕೊಳ್ಳುವುದನ್ನು ನಿಷೇಧಿಸಲಾಗಿಲ್ಲ. ಅಂತಹ ಸಾಲ ಮರು ಪಾವತಿ ಮಾಡದಿದ್ದಲ್ಲಿ ಆ ರೀತಿಯ ಆದೇಶಗಳ ಮೂಲಕ ಜಮೀನಿನ ಮಾರಾಟ ಅಥವಾ ವರ್ಗಾವಣೆ ಮಾಡುವುದಕ್ಕೆ ಕಾಯ್ದೆಯಡಿ ಅವಕಾಶ ಇಲ್ಲ. ಈ ಪ್ರಕರಣದಲ್ಲಿ ಜಮೀನು ಮಾಲೀಕರು ಗೃಹನಿರ್ಮಾಣ ಸೊಸೈಟಿಯಿಂದ ಮಾರಾಟದ ಒಪ್ಪಂದವನ್ನು ಮಾತ್ರ ಮಾಡಿಕೊಂಡಿದ್ದಾರೆ. ಆದರೆ, ಸೊಸೈಟಿ ಬ್ಯಾಂಕ್‌ನಿಂದ ಸಾಲ ಪಡೆಯುವ ಸಂದರ್ಭದಲ್ಲಿ ಆಸ್ತಿಯ ಹೆಸರಿನಲ್ಲಿ ಅಡ ಇಡಲಾಗಿದೆ. ಹೀಗಾಗಿ ಜಮೀನು ಮಾಲೀಕರು ಬ್ಯಾಂಕ್ ಮತ್ತು ಸೊಸೈಟಿ ನಡುವಿನ ಒಪ್ಪಂದಕ್ಕೆ ಜವಾಬ್ದಾರರಾಗುವುದಿಲ್ಲ ಎಂದು ಪೀಠ ತಿಳಿಸಿದೆ. ಜಮೀನು ಮಾಲೀಕರು ಬ್ಯಾಂಕಿನಿಂದ ಯಾವುದೇ ಸಾಲ ಪಡೆಯದ ಹಿನ್ನೆಲೆಯಲ್ಲಿ ಪಿಟಿಸಿಎಲ್ ಕಾಯ್ದೆಯ (ಸೆಕ್ಷನ್ 5 ಮತ್ತು 5ಎ) ಅಡಿಯಲ್ಲಿ ಉಪವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ನೀಡಿರುವ ತೀರ್ಪಿನಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.

You may also like

Leave a Comment