Lakkundi: : ಮನೆ ಕಟ್ಟಲು ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಕೆಳಗಡೆ ಚಿನ್ನದ ನಿಧಿ ಪತ್ತೆಯಾಗಿರುವಂತಹ ಅಪರೂಪದ ಘಟನೆಯೊಂದು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆದಿತ್ತು. ಬಳಿಕ ಮನೆಯವರು ಸ್ವ ಇಚ್ಛೆಯಿಂದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದರು. ಇದೀಗ ಕುಟುಂಬ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದೆ. ಹೀಗಾಗಿ ಸರ್ಕಾರ ಆ ಕುಟುಂಬಕ್ಕೆ ಬೇರೆ ರೀತಿಯ ಸವಲತ್ತುಗಳನ್ನು ಕಲ್ಪಿಸುವುದಾಗಿ ಭರವಸೆಯನ್ನು ಕೂಡ ನೀಡಿದೆ. ಆದರೆ ಇದೆಲ್ಲದರ ಬೆನ್ನಲ್ಲೇ ಸರ್ಕಾರವು ಇಡೀ ಲಕ್ಕುಂಡಿ ಗ್ರಾಮವನ್ನೇ ಸ್ಥಳಾಂತರಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿದೆ.
ಹೌದು, ಕೆಲವು ದಿನಗಳ ಹಿಂದೆ ಮನೆಯ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ನಿಧಿ ಪತ್ತೆಯಾಗಿ ಅದನ್ನು ಸರ್ಕಾರ ವಶಪಡಿಸಿಕೊಂಡಿದೆ. ಈ ಬೆನ್ನಲ್ಲೇ ಲಕ್ಕುಂಡಿ ಗ್ರಾಮಸ್ಥರು ತಮ್ಮ ಊರುಗಳ ಅನೇಕ ಭಾಗಗಳಲ್ಲಿ ನಿಧಿ ಸಿಗುತ್ತದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹೀಗಾಗಿ ಗದಗ (Gadag) ಜಿಲ್ಲೆಯ ಲಕ್ಕುಂಡಿ (Lakkundi) ಗ್ರಾಮದಲ್ಲಿ ನಿಧಿ ಪತ್ತೆಯಾದ ಬಳಿಕ ಉತ್ಖನನ ಸೇರಿದಂತೆ ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ಲಕ್ಕುಂಡಿ ಗ್ರಾಮವನ್ನೇ ಸ್ಥಳಾಂತರಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಹೆಚ್ಕೆ ಪಾಟೀಲ್ (HK Patil) ಮಾಹಿತಿ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ್, ಲಕ್ಕುಂಡಿ ಗ್ರಾಮ ಸ್ಥಳಾಂತರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಲಕ್ಕುಂಡಿ ಗ್ರಾಮದಲ್ಲಿರುವ 16 ಪುರಾತನ ದೇವಾಲಯಗಳು ಹಾಗೂ ಬಾವಿಗಳನ್ನು ಈಗಾಗಲೇ ರಾಜ್ಯ ಸರ್ಕಾರ ರಕ್ಷಿತ ದೇವಾಲಯಗಳು ಮತ್ತು ಬಾವಿಗಳೆಂದು ಘೋಷಿಸಿದೆ. ಇದೀಗ ನಿಧಿ ಪತ್ತೆಯಾದ ನಂತರ, ಉತ್ಖನನ ಕಾರ್ಯಕ್ಕೆ ಅಡಚಣೆ ಆಗದಂತೆ ಹಾಗೂ ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸುವ ಉದ್ದೇಶದಿಂದ ಗ್ರಾಮ ಸ್ಥಳಾಂತರದ ವಿಚಾರವನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
