ಹಿಂದೂ ಧರ್ಮದಲ್ಲಿ ತುಳಸಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ತುಳಸಿ ಗಿಡ ಹಿಂದೂಗಳ ಮನೆಯಲ್ಲಿ ಸದಾ ಪೂಜನೀಯವಾದದ್ದು. ಹಾಗಾಗಿಯೇ ಪ್ರತಿಯೊಬ್ಬ ಹಿಂದೂ ಮನೆಗಳ ಮುಂದೆ ತುಳಸಿ ಕಟ್ಟೆ ಕಾಣಬಹುದು. ಧಾರ್ಮಿಕ ಕೆಲಸಗಳಿಂದ ಹಿಡಿದು ಆಯುರ್ವೇದ ಮತ್ತು ದೇಶೀಯ ಉಪಾಯಗಳಿಗಾಗಿ ತುಳಸಿಯನ್ನು ಬಳಸಲಾಗುತ್ತದೆ. ಆದರೆ ತುಳಸಿ ದಳಗಳನ್ನು ಕೀಳಲು ಶಾಸ್ತ್ರದಲ್ಲಿ ಕೆಲ ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ತುಳಸಿ ಎಲೆ ಅಥವಾ ದಳಗಳನ್ನು ತಪ್ಪಾದ ರೀತಿಯಲ್ಲಿ ಕೀಳುವುದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ತುಳಸಿ ಎಲೆಗಳನ್ನು ಕೀಳಲು ಸರಿಯಾದ ಮಾರ್ಗ ಯಾವುದು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯವಾಗುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಳಸಿ ಗಿಡ ಸ್ವತಃ ಶ್ರೀಮಹಾಲಕ್ಷ್ಮಿಯ ಸ್ವರೂಪ. ಹಾಗಾಗಿಯೇ ಶ್ರೀಮಹಾವಿಷ್ಣುವಿಗೆ ಅತ್ಯಂತ ಪ್ರೀತಿಪಾತ್ರವಾಗಿದೆ. ಶ್ರೀಕೃಷ್ಣ ಪರಮಾತ್ಮ, ತುಲಾಭಾರದಲ್ಲಿ ಸತ್ಯಭಾಮೆ ಸಮರ್ಪಿಸಿದ ಸಕಲ ಸಂಪತ್ತಿಗೂ ಬಾಗದೆ, ರುಕ್ಮಿಣಿ ಸಮರ್ಪಿಸಿದ ಒಂದು ತುಳಸಿ ದಳಕ್ಕೆ ಬದ್ಧನಾಗಿದ್ದ. ಹಾಗಾಗಿ ಇದು ಬಹಳ ಪವಿತ್ರವಾದ ಗಿಡ. ಈ ಕಾರಣಕ್ಕಾಗಿಯೇ ಅದನ್ನು ಸ್ಪರ್ಶಿಸಲು ಹಾಗೂ ಅದರ ದಳಗಳನ್ನು ತೆಗೆಯಲು ಕೆಲ ಸಲಹೆಗಳನ್ನು ನೀಡಲಾಗಿದೆ.
ನಿಮಗೆ ತುಳಸಿ ಎಲೆಗಳು ಬೇಕಾದರೆ, ಮೊದಲು ತುಳಸಿ ಕುಂಡದಲ್ಲಿ ಬಿದ್ದಿರುವ ದಳಗಳನ್ನು ತೆಗೆದುಕೊಳ್ಳಿ. ಇನ್ನೂ ಹೆಚ್ಚು ದಳಗಳು ಬೇಕಾದರೆ, ನೀವು ಸಸ್ಯದಿಂದ ಎಲೆಗಳನ್ನು ಕಿತ್ತುಕೊಳ್ಳಬಹುದು. ಆದರೆ ಕೀಳುವಾಗ ನಿಮ್ಮ ಉಗುರುಗಳು ದಳಗಳನ್ನು ಸಿಲುಕಿಕೊಳ್ಳಬಾರದು ಎಂಬುದನ್ನು ನೆನಪಿನಲ್ಲಿಡಿ. ಇದಕ್ಕಾಗಿ, ನೀವು ನಿಮ್ಮ ಬೆರಳುಗಳನ್ನು ಬಳಸುವುದು ಉತ್ತಮ. ಏಕೆಂದರೆ ತುಳಸಿ ದಳಗಳನ್ನು ಉಗುರುಗಳಿಂದ ಕೀಳುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
ತುಳಸಿ ದಳಗಳನ್ನು ಯಾವಾಗಲೂ ಬೆಳಕಿನಲ್ಲಿ ಕೀಳಬೇಕು. ಸೂರ್ಯಾಸ್ತದ ನಂತರ ತುಳಸಿ ಗಿಡವನ್ನು ಸ್ಪರ್ಶಿಸಬಾರದು. ರಾಧೆಯ ರೂಪವೆಂದು ಪರಿಗಣಿಸಲ್ಪಟ್ಟಿರುವ ತುಳಸಿ ದೇವಿಯು ಕೃಷ್ಣನೊಂದಿಗೆ ಕಾನನಕ್ಕೆ ಸಂಜೆ ಹೊರಡುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ. ಹೀಗಾಗಿ ಸಂಜೆ ದಳಗಳನ್ನು ಕೀಳುವುದು ತಪ್ಪು ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ, ಗ್ರಹಣ ಕಾಲದಲ್ಲೂ ತುಳಸಿ ದಳಗಳನ್ನು ಕೀಳಬಾರದು.
ತುಳಸಿ ದಳಗಳನ್ನು ಕೀಳಲು ದಿನವೂ ಮುಖ್ಯವಾಗಿರುತ್ತದೆ. ಭಾನುವಾರ, ದ್ವಾದಶಿ, ಅಮವಾಸ್ಯೆ, ಚತುರ್ದಶಿಯಂದು ತುಳಸಿ ದಳಗಳನ್ನು ಕೀಳುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ ಎಂಬ ನಂಬಿಕೆಯಿದೆ.
ತುಳಸಿ ಗಿಡವನ್ನು ಸ್ಪರ್ಶಿಸುವ ಮುನ್ನ ಅಥವಾ ದಳಗಳನ್ನು ಕೀಳುವ ಮೊದಲು ಶುಚಿಯಾಗ ಬೇಕು. ಸ್ನಾನ ಮಾಡಿ ಮತ್ತು ಅವುಗಳನ್ನು ಶುದ್ಧ ಕೈಗಳಿಂದ ಮಾತ್ರ ಸ್ಪರ್ಶಿಸಿ. ಕೆಳಗೆ ಬಿದ್ದ ದಳಗಳನ್ನು ಕೂಡ ಶುದ್ಧ ಕೈಗಳಿಂದ ಮಾತ್ರ ಎತ್ತಿಕೊಳ್ಳಬೇಕು. ಒಣಗಿದ ತುಳಸಿ ಗಿಡವನ್ನು ಮನೆಯಲ್ಲಿ ಇಡಬಾರದು, ಗಿಡ ಒಣಗಿದರೆ ಅದನ್ನು ಅರಿಯುವ ನೀರಿನಲ್ಲಿ ಹರಿಬಿಡಬೇಕು.
