Kodagu Rain: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಮಳೆ(Heavy Rain)ಸುರಿಯುತ್ತಿದ್ದು, ಮಳೆಯಿಂದಾಗಿ ಮರ ಬಿದ್ದು ಇಬ್ಬರು ಸಾವನಪ್ಪಿದರೂ, ಜಿಲ್ಲೆಯ ಶಾಸಕರು, (ಮಡಿಕೇರಿ ಶಾಸಕ ಹೊರತುಪಡಿಸಿ ) ಉಸ್ತುವಾರಿ ಸಚಿವರು, ವಿಧಾನ ಪರಿಷತ್, ಸದಸ್ಯರು, ಹಾಗೂ ಲೋಕಸಭಾ ಸದಸ್ಯರು, ಘಟನಾ ಸ್ಥಳಕ್ಕೆ ಭೇಟಿ ನೀಡದೆ ಇರುವ ಬಗ್ಗೆ ಇದೀಗ ಸಾರ್ವಜನಿಕರಲ್ಲಿ(Publics) ಇವರ ಬಗ್ಗೆ ಅಸಮಾಧಾನ ಮೂಡಿದೆ.
ಮೂರು ದಿನದಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಮಳೆಯಿಂದಾಗಿ ವಿದ್ಯುತ್ ಕಂಬಗಳು, ಮರಗಳು ಧರೆಗೆ ಉರುಳುತ್ತಿವೆ, ಮಳೆ ನೀರಿನಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿ ಅನಾಹುತ ಕೂಡ ಉಂಟಾಗಿದೆ. ತೊಂದರೆಗೆ ಸಿಲುಕಿದವರು ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ನಮ್ಮ ಸಹಾಯಕ್ಕೆ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡವರಿಗೆ ಇದೀಗ ನಿರಾಸೆ ಉಂಟಾಗಿದೆ.
ಒಂದು ಕಡೆ ಭಾರಿ ಮಳೆ, ಮತ್ತೊಂದೆಡೆ ಕಾಡಿನ ಪ್ರಾಣಿಗಳು ನಾಡಿಗೆ, ಆನೆ ತುಳಿತಕ್ಕೆ ದುರ್ಬಲ ವ್ಯಕ್ತಿಗಳ ಸಾವು ಇಷ್ಟಲ್ಲಾದರೂ ಈ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಲಿ ನಾಪತ್ತೆಯಾಗಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕೀಯ ಪಕ್ಷದ ಮುಖಂಡರುಗಳು, ಮನೆ ಮನೆಗೆ ಧಾವಿಸಿ, ಸುಳ್ಳು ಭರವಸೆಯನ್ನು ನೀಡಿ ಹೋದ ನಂತರ ದುರ್ಘಟನೆ ಸಂಭವಿಸಿದಾಗ ಅಥವಾ ಪ್ರಕೃತಿ ವಿಕೋಪದಿಂದ ತೊಂದರೆಗೆ ಸಿಲುಕಿದಾಗ ಈ ರಾಜಕೀಯ ಪಕ್ಷದ ಮುಖಂಡರುಗಳು ಕೂಡ ಧಾವಿಸದೆ ಇರುವುದು ಕೂಡ ಆಯಾಯ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಮಾನವೀಯ ಮೌಲ್ಯಗಳನ್ನು ಕೆಲವು ರಾಜಕಾರಣಿಗಳು, ಮರೆತಿದ್ದಾರೆ ಎಂಬುದಕ್ಕೆ ಈ ಮೂರು ದಿನಗಳ ಮಳೆಯ ಅವಾಂತರ ಸಂದರ್ಭ ಇವರುಗಳ ನಡವಳಿಕೆ ಸಾಕ್ಷಿಯಾಗಿದೆ. ವಿವಿಧ ಇಲಾಖೆಗಳ ಹಿರಿಯ ಕಿರಿಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡುವ ಜನಪ್ರತಿನಿಧಿಗಳ ಮೌನದಿಂದ ಅವರುಗಳು ಕೂಡ ಗೊಂದಲಕ್ಕೆ ಈಡಾಗಿದ್ದಾರೆ. ಒಟ್ಟಿನಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗಳನ್ನು ಸಂತ್ರಸ್ತರೇ ಅವರುಗಳ ವಾಸ ಸ್ಥಳಕ್ಕೆ ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೀಗ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
