ಉಜಿರೆ: ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರ ಅನೂಕೂಲತೆಗಾಗಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಸಂಜೆ ಕ್ಲಿನಿಕ್ ತೆರೆಯಲಾಗಿದ್ದು ໕.19 ಶುಭಾರಂಭಗೊಂಡಿತು.
ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸಂಜತ್ ವಿಶೇಷ ಸಂಜೆ ಕ್ಲಿನಿಕ್ ಉದ್ಘಾಟಿಸಿ ಮಾತನಾಡುತ್ತಾ, ಬೆಳ್ತಂಗಡಿ ತಾಲೂಕಿನ ಜನತೆಗೆ ತಜ್ಞ ವೈದ್ಯರು ಇರುವ ಇಂತಹ ಸಂಜೆ ಕ್ಲಿನಿಕ್ ಅವಶ್ಯಕತೆ ಇತ್ತು. ಕೆಲಸಕ್ಕೆ ಹೋಗುವವರಿಗೆ ಈ ಸಂಜೆ ಕ್ಲಿನಿಕ್ನಿಂದ ಬಹಳ ಪ್ರಯೋಜನವಾಗಲಿದೆ. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ. ರೋಗಿಗಳ ಅನುಕೂಲತೆಗಾಗಿ ವಿಶೇಷ ಯೋಜನೆಗಳನ್ನು ರೂಪಿಸುತ್ತಿರುವ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಸೇವೆ ಶ್ಲಾಘನೀಯವಾಗಿದೆ ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕೆಲವೊಂದು ಜನರಿಗೆ ಹಗಲು ಹೊತ್ತಿನಲ್ಲಿ ತಮ್ಮ ಕೆಲಸದ ಒತ್ತಡದಿಂದ ವೈದ್ಯರನ್ನು ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಈ ಉದ್ದೇಶದಿಂದ ನಮ್ಮ ಆಸ್ಪತ್ರೆಯಲ್ಲಿ ವಿಶೇಷ ಸಂಜೆ ಕ್ಲಿನಿಕ್ ಪ್ರಾರಂಭಿಸಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 5ರಿಂದ 7ರವರೆಗೆ ತಜ್ಞ ವೈದ್ಯರಿಂದ ವೈದ್ಯಕೀಯ ಸೇವೆ ನೀಡಲು ಉದ್ದೇಶಿಸಲಾಗಿದೆ. ನಮ್ಮೆಲ್ಲಾ ವೈದ್ಯಕೀಯ ಸೇವೆಗೆ ಬೆಂಬಲ ನೀಡುತ್ತಿರುವ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸಂಜತ್ ಅವರು ಈ ವಿಶೇಷ ಸಂಜೆ ಕ್ಲಿನಿಕ್ಗೆ ಚಾಲನೆ ನೀಡಿರುವುದು ನಮಗೆಲ್ಲ ಖುಷಿ ಕೊಟ್ಟಿದೆ ಎಂದರು.
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್.ಪಿ, ಮುಖ್ಯ ವೈದ್ಯಾಧಿಕಾರಿ, ಎಂ.ಡಿ ಫಿಸಿಷಿಯನ್ ಡಾ| ಸಾತ್ವಿಕ್ ಜೈನ್, ಚರ್ಮರೋಗ ತಜ್ಞೆ ಡಾ| ಭವಿಷ್ಯ ಕೆ. ಶೆಟ್ಟಿ ಉಪಸ್ಥಿರಿದ್ದು, ವಿಶೇಷ ಸಂಜೆ ಕ್ಲಿನಿಕ್ಗೆ ಶುಭ ಹಾರೈಸಿದರು. ಸ್ಟೋರ್ ವಿಭಾಗದ ಇನ್-ಚಾರ್ಜ್ ಜಗನ್ನಾಥ. ಎಂ. ಕಾರ್ಯಕ್ರಮ ನಿರೂಪಿಸಿದರು.













