ಇತ್ತೀಚಿಗಷ್ಟೇ ಅದೆಷ್ಟೋ ಆನೆಗಳು ರಸ್ತೆಗೆ ಇಳಿದು ಅನೇಕ ಅಪಘಾತಗಳು ಸಂಭವಿಸಿದ್ದು ಉಂಟು. ಕಾಡಿನಿಂದ ನಾಡಿಗೆ ಬರುವ ಈ ಆನೆಗಳು ತೊಂದರೆ ನೀಡುವುದಂತೂ ಖಚಿತ.
ಇದೀಗ ಜಿಲ್ಲೆಯ ಗಡಿ ಭಾಗವಾದ ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಿಯಾನೆ ಸೇರಿದಂತೆ ಮೂರು ಆನೆಗಳು ಕಬ್ಬಿನ ಲಾರಿಯೊಂದನ್ನು ತಡೆದು ಅದರಲ್ಲಿರುವ ಕಬ್ಬನ್ನು ತಿನ್ನುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದೆ.
ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೆಪಾಲಂ ಬಳಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ಹೆದ್ದಾರಿಯಲ್ಲಿ ಲಾರಿಗಳು ತಮಿಳನಾಡಿಗೆ ಕಬ್ಬು ಸಾಗಣೆ ಮಾಡುತ್ತದೆ. ಇದನ್ನು ಗಮನಿಸುವ ಆನೆಗಳು ರಸ್ತೆ ಬದಿಯಲ್ಲಿ ನಿಂತು,ಕಬ್ಬಿನ ಲಾರಿ ಸಾಗುವಾಗ ಸೊಂಡಿಲು ಹಾಕಿ ಕಬ್ಬಿನ ಜಲ್ಲೆಗಳನ್ನು ಎಳೆಯುವುದು ಸಾಮಾನ್ಯ ಸಂಗತಿ. ಆದರೆ, ಎರಡಕ್ಕಿಂತ ಹೆಚ್ಚು ಆನೆಗಳು ಒಟ್ಟಾಗಿ ಕಬ್ಬಿನ ಲಾರಿಗಳನ್ನು ಅಡ್ಡ ಹಾಕುವುದು ಅಪರೂಪ.
ಈಗ ವೈರಲ್ ಆಗಿರುವ ಫೋಟೋದಲ್ಲಿ ಮರಿಯೊಂದಿಗಿರುವ ಒಂದು ಆನೆ ಲಾರಿಯ ಬಲ ಭಾಗದಿಂದ ನಿಂತು ಕಬ್ಬಿನ ಜಲ್ಲೆಗಳನ್ನು ಎಳೆದು ತಿನ್ನುತ್ತಿದ್ದರೆ, ಇನ್ನೊಂದು ಆನೆ ಮತ್ತೊಂದು ಬದಿಯಿಂದ ಕಬ್ಬು ಎಳೆದು ತಿನ್ನುತ್ತಿದೆ.
ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದವರು ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಜನರು ಫೋಟೊ ಹಾಗೂ ಸೆಲ್ಫಿ ತೆಗೆಯುತ್ತಿರುವ ದೃಶ್ಯಾವಳಿಯೂ ವಿಡಿಯೊದಲ್ಲಿದೆ.ಈ ಫೋಟೋ ಜನರ ಮೆಚ್ಚುಗೆಗೆ ಪಾತ್ರವಾದದ್ದು ಅಂತೂ ಸುಳ್ಳಲ್ಲ.
