Home » ಅಸೆಂಬ್ಲಿ ಚುನಾವಣೆ : ಎಸ್ಸಿ-ಎಸ್ಟಿ ಮೀಸಲು ಕ್ಷೇತ್ರ ಕುರಿತು ಶಾಸಕರ ಭವನದಲ್ಲಿ ದಲಿತರ ದುಂಡು ಮೇಜಿನ ಸಭೆ .

ಅಸೆಂಬ್ಲಿ ಚುನಾವಣೆ : ಎಸ್ಸಿ-ಎಸ್ಟಿ ಮೀಸಲು ಕ್ಷೇತ್ರ ಕುರಿತು ಶಾಸಕರ ಭವನದಲ್ಲಿ ದಲಿತರ ದುಂಡು ಮೇಜಿನ ಸಭೆ .

by Praveen Chennavara
0 comments

Assembly election: ಬೆಂಗಳೂರು: “ಮೀಸಲು ಮತ ಕ್ಷೇತ್ರಗಳು ಬಲಿತ ದಲಿತರ ವಶ- ಹೊಸ ದಲಿತ ನಾಯಕತ್ವಕ್ಕಿಲ್ಲ ಅವಕಾಶ”, “ಎತ್ತ ಸಾಗುತ್ತಿದೆ ರಾಜಕೀಯ” ಎಂಬ ವಿಷಯ ಕುರಿತ ವಿಚಾರ ಸಂಕಿರಣ ಬೆಂಗಳೂರಿನ ಶಾಸಕರ ಭವನದಲ್ಲಿ ಫೆ.26ರಂದು ನಡೆಯಲಿದೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಚಿ.ನಾ.ರಾಮು, ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗೆ (Assembly election) ರಾಜಕೀಯ ಅಖಾಡ ಸಜ್ಜಾಗುತ್ತಿರುವ ಸಮಯದಲ್ಲಿ ರಾಜಕೀಯ ಮೀಸಲು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬಲಿತ ದಲಿತ ನಾಯಕರ ನಿರಂತರ ಪಾರುಪತ್ಯದ ವಿರುದ್ಧ ಧ್ವನಿ ಎತ್ತುವ ಈ ದುಂಡು ಮೇಜಿನ ಸಭೆ ಅತ್ಯಂತ ಮಹತ್ವ ಪಡೆದಿದೆ ಎಂದು ಹೇಳಿದರು.

ರಾಜ್ಯದಲ್ಲಿ 36 ಎಸ್ಸಿ ಮೀಸಲು ಕ್ಷೇತ್ರಗಳಿದ್ದು 15 ಎಸ್ಟಿ ಮೀಸಲು ಕ್ಷೇತ್ರಗಳಿವೆ. ಈ ಎಲ್ಲ ಮೀಸಲು ಕ್ಷೇತ್ರಗಳಲ್ಲಿ ನಿರಂತರವಾಗಿ ಆಯ್ಕೆಯಾದವರೇ ಮತ್ತೆ ಮತ್ತೆ ಆಯ್ಕೆಯಾಗುತ್ತಿದ್ದಾರೆ. ರಾಜಕೀಯ ಪಕ್ಷಗಳು ಕೂಡಾ ಅವರಿಗೆ ಪದೇ ಪದೇ ಟಿಕೆಟ್ ನೀಡುತ್ತಿವೆ. ಶಕ್ತಿಶಾಲಿ ದಲಿತ ರಾಜಕಾರಣಿಗಳು ಕೂಡ ಮೀಸಲು ಕ್ಷೇತ್ರಗಳಲ್ಲಿ ಗಿರಕಿ ಹೊಡೆಯುತ್ತಿದ್ದಾರೆ. ಇದರಿಂದ ಹೊಸ ದಲಿತ ನಾಯಕತ್ವ ಚಿಗುರಲು ಅವಕಾಶವಿಲ್ಲದಂತಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ಮತ್ತು ಪಂಗಡ ನಾಯಕರು ಮೀಸಲು ಕ್ಷೇತ್ರಗಳ ಜೊತೆಗೆ ಸಾಮಾನ್ಯ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಅವಕಾಶವಿದೆ. ರಾಜ್ಯ ನಾಯಕರು ಎಂದು ಬೀಗುತ್ತಿರುವ ನಾಯಕರು ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಮೀಸಲು ಕ್ಷೇತ್ರಗಳಲ್ಲಿ ಹೊಸ ನಾಯಕತ್ವ ತಾನೆ ತಾನಾಗಿ ಸೃಷ್ಟಿಯಾಗಲಿದೆ. ಆದರೆ ಹಿರಿಯ ದಲಿತ ನಾಯಕರಿಗೆ ಇದು ಬೇಕಾಗಿಲ್ಲ. ತಾವೇ ಮೂರು, ನಾಲ್ಕು, ಐದು ಸಲ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಆರು, ಏಳು ಅವಧಿಗೆ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಮೀಸಲಾತಿ ಬದಲಾಗುತ್ತಲೇ ಮತ್ತೇ ಅದೇ ಮೀಸಲು ಫಿಕ್ಸ್ ಆಗುವ ಅನ್ಯ ಕ್ಷೇತ್ರಗಳತ್ತ ವಲಸೆ ಹೋಗುತ್ತಿದ್ದಾರೆ. ಈ ಎಲ್ಲ ವಿಚಾರಗಳ ಕುರಿತು ದುಂಡುಮೇಜಿನ ಸಭೆಯಲ್ಲಿ ಚರ್ಚೆ ನಡೆಯಲಿದೆ. ವಿಚಾರವಾದಿಗಳಾದ ಮಹೇಶ್ ಚಂದ್ರಗುರು, ಮಂಟೇಲಿಂಗಯ್ಯ, ಉರಿಲಿಂಗಪೆದ್ದ ಮಠದ ಜ್ಞಾನ ಪ್ರಕಾಶ್ ಸ್ವಾಮಿ, ಬೇಲಿಮಠದ ಶಿವರುದ್ರ ಸ್ವಾಮಿ, ರಾಜ್ಯದ ಎಲ್ಲ ದಲಿತ ಸಂಘಟನೆಗಳ ರಾಜ್ಯಾಧ್ಯಕ್ಷರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

You may also like

Leave a Comment