HD Deve Gowda: ಮೇ 28 ರ ಭಾನುವಾರ ನಡೆಯಲಿರುವ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (HD Deve Gowda) ಗುರುವಾರ ಹೇಳಿದ್ದಾರೆ. ನೂತನ ಕಟ್ಟಡ ದೇಶದ ಆಸ್ತಿಯಾಗಿದ್ದು, ತೆರಿಗೆದಾರರ ಹಣದಿಂದ ಕಟ್ಟಲಾಗಿದೆ ಎಂದಿದ್ದಾರೆ. ಆದುದರಿಂದ ನಾನು ಭಾಗವಹಿಸುತ್ತೇನೆ ಎಂದಿದ್ದಾರೆ ಮಾಜಿ ಪ್ರಧಾನಿ.
ಹಿರಿಯ ದೇವೇಗೌಡರು ತಮ್ಮ ಮುತ್ಸಂಧಿ ಸ್ಥಾನ ಕೊನೆಗೂ ತೋರಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಲು ಅದೇನೂ ಬಿಜೆಪಿ ಅಥವಾ ಆರ್ ಎಸ್ ಎಸ್ ಕಚೇರಿಯೇ ಎಂದು ಪ್ರಶ್ನಿಸಿದ ದೇವೇಗೌಡ, ನಾನು ಪಾಲ್ಗೊಳ್ಳುತ್ತಿದ್ದೇನೆ. ಇದು ದೇಶದ ಆಸ್ತಿ. ಯಾರ ವೈಯಕ್ತಿಕ ವಿಚಾರವೂ ಅಲ್ಲ ಎಂದು ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಆತ್ಮಾವಲೋಕನಾ ಸಭೆಯಲ್ಲಿ ಮಾತನಾಡಿದ ದೇವೇಗೌಡರು, ಇದು ಯಾರ ವೈಯಕ್ತಿಕ ಕಾರ್ಯಕ್ರಮವಲ್ಲ, ಇದು ನಮ್ಮದೇಶದ ಕಾರ್ಯಕ್ರಮ. ದೇಶದ ಜನರ ತೆರಿಗೆ ಹಣದಿಂದ ಭವ್ಯ ಕಟ್ಟಡ ನಿರ್ಮಾಣವಾಗಿದೆ. ಇದು ದೇಶಕ್ಕೆ ಸೇರಿದ್ದು, ಬಿಜೆಪಿ ಅಥವಾ ಆರ್ಎಸ್ಎಸ್ ಕಚೇರಿ ಅಲ್ಲ ಎಂದಿದ್ದಾರೆ.
ನಾವು ರಾಜಕೀಯವಾಗಿ ಬಿಜೆಪಿಯನ್ನು ವಿರೋಧಿಸಲು ಹತ್ತು ಹಲವು ಕಾರಣಗಳಿವೆ. ಆದರೆ ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಮಾಡುವುದು ನನಗೆ ಇಷ್ಟವಿಲ್ಲ ಎಂದು ಅಧಿಕೃತ ಪ್ರಕಟಣೆಯಲ್ಲಿ ದೇವೇಗೌಡರು ತಿಳಿಸಿದ್ದಾರೆ.
ನಾನು ಸಂಸತ್ತಿನ ಉಭಯ ಸದನಗಳಿಗೆ ಚುನಾಯಿತನಾಗಿದ್ದ ಸದಸ್ಯ. ಸಾಂವಿಧಾನಿಕ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಈಗಲೂ ರಾಜ್ಯಸಭಾ ಸದಸ್ಯನಾಗಿದ್ದು, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು, ಕಾಪಾಡಲು ಕೆಲಸ ಮಾಡುತ್ತೇನೆ. ಆದುದರಿಂದ ಸಂವಿಧಾನದ ವಿಚಾರದಲ್ಲಿ ರಾಜಕೀಯವನ್ನು ತರಲು.ನಾನು ಇಷ್ಟಪಡಲ್ಲ ಎಂದಿದ್ದಾರೆ ದೇವೇಗೌಡರು.
ಈಗಾಗಲೇ ಕೇಂದ್ರದ ಪ್ರತಿಪಕ್ಷಗಳ 19 ಮಂದಿ ಸದಸ್ಯ ಪಕ್ಷಗಳು ನೂತನ ಸಂಸತ್ತನ್ನು ಪ್ರಧಾನಮಂತ್ರಿಯವರು ಉದ್ಘಾಟಿಸುವುದನ್ನು ವಿರೋಧಿಸಿದ್ದು, ನೂತನ ಸಂಸತ್ತನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕಿತ್ತು ಎಂದು ಖ್ಯಾತೆ ತೆಗೆದಿವೆ. ಈ ಮಧ್ಯೆ ಬಿಜು ಜನತಾದಳ ಮತ್ತು ವೈಎಸ್ಆರ್ ಸಿಪಿ ಸಂಸತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಾಗಿ ಹೇಳಿದೆ. ಇದೀಗ ದೇವೇಗೌಡರ ಸರದಿ.ಈ ಮಧ್ಯೆ ಪ್ರತಿಪಕ್ಷಗಳಿಗೆ ಮನವಿ ಮಾಡಿದ ಬಿಜೆಪಿಯು ಸಂಸತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಕೋರಿಕೊಂಡಿದ್ದು ಪ್ರತಿಪಕ್ಷಗಳು ಹೃದಯ ವೈಶಾಲ್ಯತೆ ತೋರಿಸಬೇಕೆಂದು ಕೇಳಿಕೊಂಡಿದೆ.
ಇದನ್ನು ಓದಿ: Ashish vidyarthi: 60 ನೇ ವಯಸ್ಸಿಗೆ 2ನೇ ಮದುವೆಯಾದ ಈ ಖಾಯಂ ವಿದ್ಯಾರ್ಥಿ !
